ಅಮೇರಿಕ ವಿದ್ಯಾರ್ಥಿಗಳ ಸಂವಹನ


ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರನ್ನು ಭೇಟಿಯಾಗಿ ರಾಜಕೀಯ ವಿಷಯವಾಗಿ ಚರ್ಚೆ ನಡೆಸಿದ ಅಮೆರಿಕಾದ ವಿದ್ಯಾರ್ಥಿನಿಯರಾದ ಜೆಸ್ಸಿಕಾ, ಫಿಬಿ, ರಿಯಾನ್ ಹಾಗೂ ಎಮಿಲಿ.

ಅಮೆರಿಕದಿಂದ ಬಂದ ವಿದ್ಯಾರ್ಥಿಗಳು ಇವರು. ಭಾರತದ ಸಂಸ್ಕೃತಿ, ಕಲೆ, ಪ್ರಗತಿ, ರಾಜಕೀಯ... ಹೀಗೆ ಈ ದೇಶದ ಎಲ್ಲ ಮಗ್ಗಲುಗಳನ್ನು ಅರಿತುಕೊಳ್ಳುವುದು ಇವರ ಅಧ್ಯಯನದ ಉದ್ದೇಶ. ಸುಮಾರು ಮೂರು ವರ್ಷಗಳ ಅಧ್ಯಯನದ ಅವಧಿಯಲ್ಲಿ ಭಾರತವನ್ನು ಪುಸ್ತಕಗಳಲ್ಲಿ ಓದಿ ತಿಳಿಯುವ ಜೊತೆಗೆ, ದೇಶವನ್ನು ಸುತ್ತಿ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.

ದೇಶದ ಮೂಲೆ ಮೂಲೆಯನ್ನು ಸುತ್ತಾಡಿ "ಸ್ವತಂತ್ರ ಅಧ್ಯಯನ" (ಇಂಡಿಪೆಂಡೆಂಟ್ ಸ್ಟಡಿ) ಕೂಡ ಮಾಡಿ ಮುಗಿಸಿದ್ದಾರೆ. ಈ ಹಂತದಲ್ಲಿ ದೇಶದ ವಿವಿಧ ವರ್ಗದ ಜನರೊಂದಿಗೆ ಸಂಪರ್ಕ ಹೊಂದಿ ಅವರೊಂದಿಗೆ ಮಾತನಾಡಿ ಭಾರತವೇನು ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ. ಸಾದು ಸಂತರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರನ್ನೂ ಭೇಟಿಯಾಗಿದ್ದೂ ಆಗಿದೆ. ಆದರೂ ಈ ಅಧ್ಯಯನವು ಪೂರ್ಣವಾಗಬೇಕೆಂದರೆ, ದೇಶದ ರಾಜಕಾರಣಿಗಳನ್ನು ಕೂಡ ಅರ್ಥ ಮಾಡಿಕೊಳ್ಳಬೇಕು. ಆಗಲೇ ಈ ದೇಶದಲ್ಲಿನ ಶಿಕ್ಷಣ ಪೂರ್ಣ ಹಾಗೂ ಅರ್ಥವತ್ತು ಎನಿಸುತ್ತದೆ.

ಇದೇ ಉದ್ದೇಶದಿಂದ ಅಮೆರಿಕದ ಈ ವಿದ್ಯಾರ್ಥಿಗಳು ರಾಜಕಾರಣಿಯೊಬ್ಬರ ಬದುಕನ್ನು ಹತ್ತಿರದಿಂದ ನೋಡಬೇಕೆಂದು ಬಯಸಿದರು. ಅದಕ್ಕಾಗಿ ಸೂಕ್ತ ರಾಜಕಾರಣಿಗಾಗಿ ಅಂತರ್ ಜಾಲದಲ್ಲಿ ಹುಡುಕಾಟ ನಡೆಸಿದರು. ಆಗ ಕಣ್ಣಿಗೆ ಬಿದ್ದಿದ್ದು ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರ ಬ್ಲಾಗ್. ಆಗಲೇ ಇದೇ ರಾಜಕಾರಣಿಯೊಂದಿಗೆ ಸಂವಹನ ನಡೆಸಿ, ರಾಜಕೀಯ ಪರಿಸ್ಥಿತಿ ಹಾಗೂ ರಾಜಕಾರಣಿಗಳ ಬದುಕು ಅರಿಯುವ ನಿರ್ಧಾರ ಮಾಡಿದರು.

ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕಂಡು ದೇಶದ ರಾಜಕಾರಣಿಗಳ ಬಗ್ಗೆ ಮೂಡಿಸಿಕೊಂಡ ಪೂರ್ವಾಗ್ರಹ ಎಷ್ಟರ ಮಟ್ಟಿಗೆ ಸತ್ಯ-ಸುಳ್ಳು ಎನ್ನುವುದನ್ನು ನಿಖರವಾಗಿ ಅರಿಯುವುದು ಅವರ ಉದ್ದೇಶ. ಆ ನಿಟ್ಟಿನಲ್ಲಿ ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರ ಭೇಟಿಯು ಅರ್ಥವತ್ತು ಎನಿಸಿತು. ಒಮ್ಮೆ ಚುನಾಯಿತರಾದ ಈ ದೇಶದ ಜನಪ್ರತಿನಿಧಿಗಳು ಮತ್ತೆ ಜನರ ಕೈನಿಲುಕಿಗೆ ಸಿಗುವುದು ಮತ್ತೊಮ್ಮೆ ಚುನಾವಣೆ ಬಂದಾಗಲೇ ಎನ್ನುವ ಅಭಿಪ್ರಾಯವೂ ಅಮೆರಿಕದ ಈ ವಿದ್ಯಾರ್ಥಿಗಳ ಮನದಿಂದ ಮಾಯವಾಯಿತು. ರಾಮಸ್ವಾಮಿ ಗೌಡ ಅವರು ಕುಣಿಗಲ್ ನಲ್ಲಿ ಇರುವ "ನಮ್ಮ ಮನೆ" (ರಾಮಸ್ವಾಮಿ ಗೌಡ ಅವರ ಕಚೇರಿ)ಯಲ್ಲಿ ವಾರದಲ್ಲಿ ಆರು ದಿನವೂ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುವ ರೀತಿಯನ್ನು ಕಂಡು ಬೆರಗಾಗಿದ್ದಾರೆ. ಭಾರತದಲ್ಲಿ ರಾಜಕಾರಣಿ ಹೀಗೆ ಸಾಮಾನ್ಯರಿಗೆ ಹತ್ತಿರವಾಗಿರಲು ಸಾಧ್ಯವೆಂದು ಅಚ್ಚರಿಯಿಂದ ನೋಡಿದ್ದಾರೆ.

ಬಿ.ಬಿ.ರಾಮಸ್ವಾಮಿ ಗೌಡ ಅವರ ಜೊತೆಗಿನ ಸಂವಹನದ ಫಲವಾಗಿ ನಾಡಿನ ಎಲ್ಲ ರಾಜಕಾರಣಿಗಳು ಒಂದೇ ಎಂದು ಅಮೆರಿಕದ ವಿದ್ಯಾರ್ಥಿಗಳು ಹೊಂದಿದ್ದ "ಪೂರ್ವಾಗ್ರಹ"ವೂ ಬದಲಾಗಿದೆ. ರಾಜಕಾರಣಿಗಳಲ್ಲಿ ಕೆಲವರಾದರೂ ಹೀಗೆ ಜನರಿಗೆ ಹತ್ತಿರವಾಗಿ ಇರುತ್ತಾರೆ ಭಾರತದಲ್ಲಿ ಎಂದು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿದ್ದಾರೆ. ರಾಜಕಾರಣಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಅವರು ಬದಲಿಸಿಕೊಂಡು ಅಮೆರಿಕಕ್ಕೆ ಹಿಂದಿರುಗಿ ಹೋಗುತ್ತಿದ್ದಾರೆ.

ಭಾರತದಲ್ಲಿನ ಶಿಕ್ಷಣದ ಕೊನೆಯ ಹಂತದಲ್ಲಿರುವ ಈ ಅಮೆರಿಕದ ವಿದ್ಯಾರ್ಥಿಗಳಿಗೆ ಈಗ ಸಾರ್ಥಕ್ಯ ಭಾವ. ದೇಶದ ರಾಜಕಾರಣಿಯನ್ನು ಕೂಡ ಭೇಟಿಯಾಗುವುದರೊಂದಿಗೆ ಭಾರತದ ಎಲ್ಲ ವರ್ಗದವರೊಂದಿಗೆ ಸಂವಹನ ನಡೆಸಿದ ಸಂತೃಪ್ತಿಯನ್ನು ಈ ಅಮೆರಿಕದ ವಿದ್ಯಾರ್ಥಿಗಳು ಹೊಂದಿದ್ದಾರೆ. ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರ ಜೊತೆಗಿನ ಸಂವಹನದೊಂದಿಗೆ ಅವರ ಶಿಕ್ಷಣವೂ ಪರಿಪೂರ್ಣವಾಗಿದೆ.

ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಹೊತ್ತು ತಂದ ಕ್ಯಾಲೆಂಡರ್


ರಾಜಕಾರಣಿಗಳು ವರ್ಷಕ್ಕೊಮ್ಮೆ ತಮ್ಮ ಅಭಿಮಾನಿಗಳು ಹಾಗೂ ಮಿತ್ರರಿಗೆ ನೀಡುವ ಕ್ಯಾಲೆಂಡರ್ ಹೇಗಿರುತ್ತವೆ ಎಂದು ವಿವರಿಸಿ ಹೇಳಬೇಕಾಗಿಲ್ಲ. ಭವಿಷ್ಯದಲ್ಲಿ ಬರುವ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕ್ಯಾಲೆಂಡರ್ ತುಂಬಾ ಸ್ವಯಂ ಪರಾಕ್ ಮಾಡಿಕೊಂಡ ಸಾಲುಗಳು ಹಾಗೂ ದೊಡ್ಡ ಕಟೌಟ್ ಫೋಟೊ! ಆದರೆ ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಬಿ. ರಾಮಸ್ವಾಮಿ ಗೌಡ ಅವರು ಮಾತ್ರ ಇಂಥ ಹಾದಿಯನ್ನು ಹಿಡಿದಿಲ್ಲ. ಹೊಸ ವರ್ಷವಾದ 2011ರ ಕ್ಯಾಲೆಂಡರಿನ ಪ್ರತಿಯೊಂದು ಪುಟವನ್ನು ಸಾಮಾಜಿಕ ಕಳಕಳಿಯ ಸಂದೇಶಗಳಿಂದ ಅಲಂಕರಿಸಿದ್ದಾರೆ.

ಜನರಿಗೆ ಒಳಿತಾಗುವಂಥ ಸಂದೇಶಗಳನ್ನು ಮಾತ್ರ ಕ್ಯಾಲೆಂಡರ್ ಪುಟಗಳಲ್ಲಿ ಸಚಿತ್ರವಾಗಿ ವಿನ್ಯಾಸಗೊಳಿಸುವ ಮೂಲಕ ಅವುಗಳಿಗೆ ಆಕರ್ಷಕ ಚಿತ್ರಗಳ ಪ್ರಭಾವಳಿಯನ್ನೂ ನೀಡಲಾಗಿದೆ. "ಜನರು ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು; ಹಾಗೆ ಇರಬೇಕು. ಜೊತೆಗೆ ಕ್ಯಾಲೆಂಡರ್ ಮಾಧ್ಯಮದಿಂದ ಒಂದಿಷ್ಟು ಒಳ್ಳೆಯ ಸಂದೇಶವನ್ನೂ ನೀಡಬೇಕು" ಎಂದು ಹೇಳುವ ಬಿ.ಬಿ.ರಾಮಸ್ವಾಮಿ ಗೌಡ ಅವರು ಅದಕ್ಕೆ ತಕ್ಕಹಾಗೆಯೇ ಕ್ಯಾಲೆಂಡರ್ ಅನ್ನು ಪ್ರಕಟಿಸಿದ್ದಾರೆ.

ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಆಕರ್ಷಕ ವಿನ್ಯಾಸದೊಂದಿಗೆ ಕ್ಯಾಲೆಂಡರಿನಲ್ಲಿ ಅಳವಡಿಸಿರುವುದು ವಿಶೇಷ. ರಕ್ತದಾನ, ನೇತ್ರದಾನದ ಮಹತ್ವ ಸಾರುವ ವಾಕ್ಯಗಳು ಕ್ಯಾಲೆಂಡರಿನಲ್ಲಿ ಗಮನ ಸೆಳೆಯುತ್ತವೆ. ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರುವ ಸಾಲುಗಳೂ ಸಚಿತ್ರವಾಗಿ ಕಾಣಿಸಿವೆ. ಮದ್ಯಪಾನ, ಧೂಮಪಾನ ಹಾಗೂ ಗುಟಕಾ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಸಂದೇಶವೂ ಮನತಟ್ಟುವಂತೆ ಕ್ಯಾಲೆಂಡರಿನಲ್ಲಿ ಮೂಡಿದೆ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದಕ್ಕೆ ಒತ್ತು ನೀಡುವ ಜೊತೆಗೆ ಬಾಲಕಾರ್ಮಿಕ ಶೋಷಣೆ ತಡೆಗೂ ಧ್ವನಿ ಎತ್ತಲಾಗಿದೆ. ಇನ್ನೊಂದು ವಿಶೇಷವೆಂದರೆ ಈ ಕ್ಯಾಲೆಂಡರಿನಲ್ಲಿ ಕೌಟುಂಬಿಕ ದೌರ್ಜನ್ಯ ತಡೆಗೆ ಎಚ್ಚರಿಕೆಯ ಕರೆಗಂಟೆ ರಿಂಗಣಿಸುವ ಸಂದೇಶವೂ ಇದೆ.

ಶಾಸ್ತ್ರಕ್ಕೆ ಎನ್ನುವಂತೆ ತಿಂಗಳುಗಳನ್ನು ಜೋಡಿಸಿಟ್ಟು ತಮ್ಮದೇ ದೊಡ್ಡ ಛಾಯಾಚಿತ್ರವನ್ನು ದೊಡ್ಡದಾಗಿ ಅಲಂಕರಿಸಲು ಒಪ್ಪದ ರಾಮಸ್ವಾಮಿ ಗೌಡರು ತಮ್ಮ ಹೆಸರು ಜೊತೆಗೊಂಡು ಸಣ್ಣ ಚಿತ್ರ ಮಾತ್ರ ಕ್ಯಾಲೆಂಡರಿನಲ್ಲಿ ಇರುವಂತೆ ನೋಡಿಕೊಂಡಿದ್ದಾರೆ ಈ ಚಿತ್ರಗಳಲ್ಲಿ ಕೆಲವಂತೂ ಪ್ರಾಣಿದಯೆಯನ್ನು ಎತ್ತಿ ತೋರಿಸುವಂಥವು. ಪ್ರತಿಯೊಂದು ಪುಟದ ಹೆಚ್ಚಿನ ಸ್ಥಳದಲ್ಲಿ ದಿನಾಂಕಗಳು ಎದ್ದು ಕಾಣುವಂತೆ ಮಾಡುವ ಜೊತೆಗೆ ಪ್ರತಿ ತಿಂಗಳ ಮಹತ್ವದ ದಿನಗಳ ಪಟ್ಟಿಯನ್ನೂ ನೀಡುವುದಕ್ಕೆ ಆದ್ಯತೆ ನೀಡಿರುವುದು ವಿಶೇಷ.

ಇಂಥದೊಂದು ವಿಶಿಷ್ಟವಾದ ಕ್ಯಾಲೆಂಡರ್ ಅನ್ನು ಸಾವಿರಾರು ಸಂಖ್ಯೆಯಲ್ಲಿ ಮುದ್ರಿಸಿ ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಬಿ.ಬಿ. ರಾಮಸ್ವಾಮಿ ಗೌಡ ಅವರು ಮಾಡಿದ್ದಾರೆ. ನಿಮಗೂ ಇದರ ಉಚಿತ ಪ್ರತಿ ಬೇಕಿದ್ದರೆ ಶಾಸಕರ ಆಪ್ತ ಸಲಹೆಗಾರರಾದ ಕೆ.ಆರ್. ಸುದರ್ಶನ್ ಬಾಬು (ಮೊಬೈಲ್: 9845977181 ಅಥವಾ 9986790221) ಅವರನ್ನು ಸಂಪರ್ಕಿಸಬಹುದು. ಇಲ್ಲವೆ ಇ-ಮೇಲ್ ವಿಳಾಸ bbramaswamygowda@gmail.com ಕ್ಕೆ ಸಂದೇಶ ಕಳುಹಿಸಬೇಕಾಗಿ ಕೋರಿಕೆ.


ಧನ್ಯವಾದಗಳು
ಕೆ.ಆರ್. ಸುದರ್ಶನ್ ಬಾಬು
ಶಾಸಕರ ಆಪ್ತ ಸಲಹೆಗಾರರು

ರಾಜ್ಯ ಸರ್ಕಾರಕ್ಕೆ "ಜಾಣಕಿವುಡು"

ನನ್ನ ಜನರಿಗೆ ಇನ್ನಷ್ಟು... ಮತ್ತಷ್ಟು...

ಸೌಲಭ್ಯ ಒದಗಿಸುವ ಪ್ರಯತ್ನ

ಕುಣಿಗಲ್ ತಾಲೂಕಿನಿಂದ ವಿಧಾನಸಭಾ ಸದಸ್ಯನಾಗಿ ಆಯ್ಕೆಯಾದಾಗಿನಿಂದಲೂ ನನ್ನ ತುಡಿತ ಹಾಗೂ ಎದೆಯ ಬಡಿತ ಒಂದೇ ಆಗಿದೆ; ನನ್ನ ಜನರಿಗೆ ಇನ್ನಷ್ಟು... ಮತ್ತಷ್ಟು ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎನ್ನುವುದು.

ಕುಣಿಗಲ್ ತಾಲೂಕು ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ ರಾಷ್ಟ್ರಕ್ಕೆ ಮಾದರಿ ತಾಲೂಕು ಆಗಬೇಕು. ಇದು ನನ್ನ ಕನಸು. ಈಗಾಗಲೇ ಆ ನಿಟ್ಟಿನಲ್ಲಿ ನನ್ನ ಪ್ರಯತ್ನವನ್ನು ನಡೆಸಿದ್ದೇನೆ. ಒಂದಿಷ್ಟು ಕೆಲಸವೂ ಆಗಿದೆ. ಆದರೆ ಅಷ್ಟು ಸಾಕಾಗದು; ಆಗಬೇಕಾಗಿದ್ದು ಇನ್ನೂ ಸಾಕಷ್ಟಿದೆ. ಅದಕ್ಕಾಗಿ ನಿತ್ಯ ಪ್ರಯತ್ನ ಸಾಗಿದೆ.

ನನ್ನ ಮೇಲೆ ವಿಶ್ವಾಸವಿಟ್ಟು ಮತ ಕೊಟ್ಟು ವಿಧಾನಸಭಾ ಸದಸ್ಯನನ್ನಾಗಿ ಮಾಡಿದ ನನ್ನ ಜನರಿಗೆ ಪ್ರತಿಯಾಗಿ ದೊಡ್ಡ ಕೊಡುಗೆ ಕೊಡಬೇಕು. ಆ ದೊಡ್ಡ ಕೊಡುಗೆಯೆಂದರೆ ಅಭಿವೃದ್ಧಿ ಮಾತ್ರ. ಹಿಂದೆ ಅನೇಕ ಬಾರಿ ಹೇಳಿದಂತೆ ನನ್ನದು "ಅಭಿವೃದ್ಧಿಪರ ರಾಜಕೀಯ". ನನ್ನ ತಾಲೂಕು ಅಭಿವೃದ್ಧಿ ಆಗಬೇಕು, ಜನರಿಗೆ ಉತ್ತಮ ಸೌಲಭ್ಯಗಳು ಸಿಗಬೇಕು. ಇದೇ ನನ್ನ ಹೃದಯ ಮಿಡಿತ.

ಕುಣಿಗಲ್ "ಸ್ಟಡ್ ಫಾರ್ಮ್"(ಕುದುರೆಗಳ ಸಾಕಾಣಿಕೆ ಕೇಂದ್ರ)ಗೆ ಬಂದಿದ್ದ ಆಪತ್ತನ್ನು ತಪ್ಪಿಸಿದ್ದು, ರೈಲು ಮಾರ್ಗವು ಐತಿಹಾಸಿಕ ಸ್ಟಡ್ ಫಾರ್ಮ್ ಗೆ ಅಪಾಯಕಾರಿ ಆಗದಂತೆ ದೂರಕ್ಕೆ ಕಳುಹಿಸಿದ್ದು, ಕುಣಿಗಲ್ ನಗರ ಸಮೀಪದ ದೊಡ್ಡ ಕೆರೆಯಲ್ಲಿ ವರ್ಷ ಪೂರ್ತಿ ನೀರು ಇರುವುದಕ್ಕೆ ಹರಿವಿನ ಮಾರ್ಗ ರೂಪಿಸಿದ್ದು, ಮುಖ್ಯ ರಸ್ತೆ ಅಗಲೀಕರಣ ಮಾಡಿಸಿದ್ದು... ಹೀಗೆ ಇಲ್ಲಿಯವರೆಗೆ ಆಗಿರುವ ದೊಡ್ಡ ಕೆಲಸಗಳ ಪಟ್ಟಿಯನ್ನೂ ದೊಡ್ಡದಾಗಿ ಮಾಡಬಹುದು.

ಆದರೂ ನನಗೆ ತೃಪ್ತಿ ಇಲ್ಲ. ತಾಲೂಕಿಗೆ ಇನ್ನೂ ಅನೇಕ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎನ್ನುವ ಹಸಿವು ಹಾಗೆಯೇ ಇದೆ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅನೇಕ ಯೋಜನೆಗಳ ಕುರಿತು ಕೋರಿಕೆ ಸಲ್ಲಿಸಿ ಮನವಿಗಳ ಕಂತೆಗಳನ್ನೇ ಕಳುಹಿಸಿಕೊಟ್ಟಿದ್ದಾಗಿದೆ. ಆದರೆ ಏನು ಮಾಡುವುದು? ಅಲ್ಲಿರುವುದು ನಮ್ಮ ಕಾಂಗ್ರೆಸ್ ಸರ್ಕಾರ ಅಲ್ಲ. ಆದ್ದರಿಂದ ಕಾಂಗ್ರೆಸ್ ಶಾಸಕನಾದ ನನ್ನ ತಾಲೂಕಿಗೆ ಯೋಜನೆಗಳನ್ನು ಮಂಜೂರು ಮಾಡುವಲ್ಲಿ ರಾಜ್ಯ ಸರ್ಕಾರವು ವಿಳಂಬ ನೀತಿಯನ್ನು ಅನುಸರಿಸಿಕೊಂಡು ಸಾಗಿದೆ.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಅನೇಕ ಸಭೆಗಳಲ್ಲಿ ನನ್ನ ತಾಲೂಕಿನಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಕೋರಿಕೊಂಡಿದ್ದಾಗಿದೆ, ಒತ್ತಾಯಿಸಿದ್ದಾಗಿದೆ, ಗಟ್ಟಿಯಾದ ಧ್ವನಿಯಲ್ಲಿ ಕೂಗಿ ಹೇಳಿದ್ದಾಗಿದೆ. ಆದರೂ ಅದೇಕೋ ಇನ್ನೂ ರಾಜ್ಯ ಸರ್ಕಾರ ಕಿವಿ ಮುಚ್ಚಿಕೊಂಡಿದೆ.

ತಾಲೂಕಿಗೆ ಆಗಬೇಕಾದ ಕೆಲಸಗಳಿಗಾಗಿ ಒತ್ತಾಯಿಸಿ ಜನರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುವುದು; ಜನರಿಗೆ ಅನಗತ್ಯವಾಗಿ ತೊಂದರೆ ಕೊಡುವುದು ನನಗೆ ಇಷ್ಟವಿಲ್ಲ. ಅದಕ್ಕೆ ಕಾರಣವೂ ಇದೆ; ಈಗ ಹೋರಾಡಬೇಕಾಗಿರುವುದು ಜನರಲ್ಲ. ಅವರು ತಮ್ಮ ಪ್ರತಿನಿಧಿಯಾಗಿ ಆಯ್ಕೆಮಾಡಿ ಕಳುಹಿಸಿರುವಂಥ ನಾನು. ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಅವರ ಕೋರಿಕೆಗಳನ್ನು ರಾಜ್ಯ ಸರ್ಕಾರಕ್ಕೆ ತಲುಪಿಸಿ, ಆ ಎಲ್ಲ ಕೋರಿಕೆಗಳು ಈಡೇರುವಂತೆ ಮಾಡುವುದು ನನ್ನ ಹೊಣೆ.

ಅದಕ್ಕಾಗಿಯೇ ನಾನೆಂದೂ ಜನರನ್ನು ಗುಂಪು ಕಟ್ಟಿಕೊಂಡು ಪ್ರತಿಭಟನೆ ಮಾಡುವ ಹಾಗೂ ಪ್ರಚಾರ ಪಡೆಯುವ ದುಸ್ಸಾಹಸ ಮಾಡಿಲ್ಲ. ಜನರು ನನ್ನ ಜೊತೆಗೆ ನಿಂತು ಧ್ವನಿಗೂಡಿಸಬೇಕು ಎನ್ನುವ ಅನಿವಾರ್ಯತೆ ಬಂದಾಗ ಹಾಗೆ ಮಾಡಿದರೆ ಅದಕ್ಕೊಂದು ಅರ್ಥವೂ ಇರುತ್ತದೆ. ಅದನ್ನು ಬಿಟ್ಟು ಕೇವಲ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡಿ, ಜನರಿಗೂ ಅನಗತ್ಯವಾಗಿ ತೊಂದರೆ ನೀಡುವುದು ಸರಿಯೂ ಅಲ್ಲ. ಯಾವುದೇ ಪರಿಸ್ಥಿತಿ ಇರಲಿ; ನೇರವಾಗಿ ಸಂಬಂಧಿಸಿದವರ ಕಡೆಗೆ ಹೋಗಿ ಕೋರಿಕೆ, ಬೇಡಿಕೆ, ಒತ್ತಾಯ, ಪ್ರತಿಭಟನೆ ಮಾಡುವುದು ನನ್ನೊಬ್ಬನ ಜವಾಬ್ದಾರಿ. ನಾನು ಮಾಡುತ್ತಿರುವುದೂ ಅದನ್ನೇ. ರಾಜ್ಯ ಸರ್ಕಾರದ ಜೊತೆಗೆ ನಮ್ಮ ಜನರ ಬೇಡಿಕೆ ಈಡೇರಿಸುವಂತೆ ಸದಾ ಹೋರಾಟ ನಡೆಸಿದ್ದೇನೆ.

ಆದರೆ ರಾಜ್ಯ ಸರ್ಕಾರಕ್ಕೆ ಜಾಣ ಕಿವುಡು. ತಮ್ಮ ಪಕ್ಷದವರಲ್ಲದ ಶಾಸಕರು ಇರುವ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಯ ವಿಷಯವನ್ನು ರಾಜ್ಯ ಸರ್ಕಾರವು ನಿರ್ಲಕ್ಷಿಸುತ್ತಿದೆ. ಮಾಡುವುದಾಗಿ ಹೇಳಿದ ಕೆಲಸಗಳನ್ನು ಮಾಡುವಲ್ಲಿಯೂ ವಿಳಂಬ ನೀತಿ ಅನುಸರಿಸುತ್ತಿದೆ. ಈ ರೀತಿಯಲ್ಲಿ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಏನೂ ಕೆಲಸವೇ ಆಗುತ್ತಿಲ್ಲ ಎನ್ನುವ ಭಾವನೆಯನ್ನು ಜನರ ಮನದಲ್ಲಿ ಮೂಡಿಸುವ ಪ್ರಯತ್ನ ನಡೆಸಿದೆ.

ಏನೇ ಆಗಲಿ; ನಾನಂತೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ನನ್ನ ತಾಲೂಕಿನ ಜನರಿಗೆ ಹೆಚ್ಚು ಹೆಚ್ಚು ಸೌಲಭ್ಯಗಳು ಸಿಗುವಂತೆ ಮಾಡಲು ನಿತ್ಯ ಹೋರಾಟ ಮಾಡುತ್ತೇನೆ. ಎಲ್ಲಿಯವರೆಗೆ ರಾಜ್ಯ ಸರ್ಕಾರ ನನ್ನ ಹಾಗೂ ನನ್ನ ಜನರ ಕೋರಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಗ್ಗುವುದಿಲ್ಲವೆಂದು ನೋಡುತ್ತೇನೆ.

ತಾಲೂಕಿನಲ್ಲಿ ಶಾಲೆಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕು, ತಾಲೂಕಿನಲ್ಲಿ ಈಗ ಇರುವ ಸರ್ಕಾರಿ ಶಾಲೆಗಳಿಗೆ ಅಗತ್ಯ ಇರುವಷ್ಟು ಶಿಕ್ಷಕರನ್ನು ಹೊಸದಾಗಿ ನೇಮಕ ಮಾಡಬೇಕು, ನೀರಿನ ಕೊರತೆ ಇರುವಂಥ ತಾಲೂಕಿನ ಕೆಲವು ಪ್ರದೇಶಗಳಿಗೆ ನೀರು ಸರಬರಾಜು ಮಾಡುವುದಕ್ಕೆ ಯೋಜನೆ ರೂಪಿಸಬೇಕು, ರಸ್ತೆಗಳ ಅಭಿವೃದ್ಧಿ ಆಗಬೇಕು, ಸಾರಿಗೆ ವ್ಯವಸ್ಥೆ ಹೆಚ್ಚಿಸಬೇಕು... ಹೀಗೆ ಹತ್ತಾರು ಮೂಲ ಅಗತ್ಯಗಳ ಕಡೆಗೆ ರಾಜ್ಯ ಸರ್ಕಾರ ಗಮನ ನೀಡಿದರೆ ಒಳಿತು. ಈ ಕೋರಿಕೆಗಳನ್ನು ಕಿವಿಯ ಮೇಲೆ ಹಾಕಿಕೊಳ್ಳದೆಯೇ, ಇನ್ನಷ್ಟು ಕಾಲ ಜಾಣ ಕಿವುಡನಾಗಿ ಇರುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡದಿರುವುದೇ ಒಳಿತು!

ಹೆತ್ತಮ್ಮನನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ...!

ಸುಳ್ಳು ಸುದ್ದಿ ಹರಡಿದವರಿಗೊಂದು ದಿಟ್ಟ ಉತ್ತರ

ರಾಜಕೀ ಕ್ಷೇತ್ರದಲ್ಲಿ ನಾನು ಕೂಸಾಗಿ ಕಣ್ಣು ಬಿಟ್ಟಿದ್ದೇ ಕಾಂಗ್ರೆಸ್ ಪಕ್ಷದಲ್ಲಿ. ಆದ್ದರಿಂದ ಈ ಪಕ್ಷವೇ ನನ್ನ ಹೆತ್ತಮ್ಮ. ಹೋರಾಟದ ಹಾದಿಯಲ್ಲಿ ನಡೆಯುವುದನ್ನು ಕಲಿಸಿದ ಹಾಗೂ ಜನಸೇವೆಗಾಗಿ ಯೋಚನೆ ಮಾಡುವ ಮತ್ತು ದುಡಿಯುವ ಪಾಠವನ್ನು ಕಲಿಸಿದ ಮೊದಲ ಗುರುವೂ ಹೌದು. ಸೋಲಿನ ಕಹಿಯನ್ನು ಉಂಡಾಗ ಸಾಂತ್ವನ ಹೇಳಿದ ಹಾಗೂ ಗೆದ್ದು ಸಂಭ್ರಮಿಸಿದಾಗ ಜನರ ಹಿತಕ್ಕಾಗಿ ಸ್ಪಂದಿಸುವಂತೆ ಸರಿಯಾದ ದಾರಿ ತೋರಿಸಿದ ಈ ಮಹಾತಾಯಿಯನ್ನು ಎಂದೂ ಬಿಟ್ಟು ಹೋಗಲು ಸಾಧ್ಯವಿಲ್ಲ. ನಾನು ಹಾಗೆ ಮಾಡುತ್ತೇನೆ ಎಂದು ಸುಳ್ಳು ಸುದ್ದಿ ಹರಡಿದ ಎಲ್ಲರಿಗೂ ಇದೇ ನಾನು ನೀಡುವ ದಿಟ್ಟ ಉತ್ತರ.


ಬಿ.ಬಿ.ರಾಮಸ್ವಾಮಿ ಗೌಡ
ಶಾಸಕರು, ಕುಣಿಗಲ್ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ತೊರೆಯುತ್ತಿದ್ದಾರೆ ಬಿ.ಬಿ.ರಾಮಸ್ವಾಮಿ ಗೌಡರು ಅಂತಾ ಸುದ್ದಿ ಚಾನಲ್ಲೊಂದರಲ್ಲಿ ಬರುತ್ತಿದೆ ನೋಡಿ ಸರ್ ಅಂತಾ ಫೋನ್ ಮಾಡಿ ಹೇಳಿದರು ನನ್ನ ಆತ್ಮೀಯರೊಬ್ಬರು. ನನಗೆ ಅಚ್ಚರಿ! ಸುಮಾರು ಒಂದು ವಾರದ ಕಾಲ ನಾನು ನವದೆಹಲಿಯಲ್ಲಿ ಇದ್ದಾಗ ಇಂಥದೊಂದು ಸುಳ್ಳು ಸುದ್ದಿಯು ಕರ್ನಾಟಕದಲ್ಲಿ ಹರಡಿಕೊಂಡಿತ್ತು. ಅದು ನನಗೆ ಹಾಸ್ಯಾಸ್ಪದ ಸುದ್ದಿ ಎಂದು ಕೂಡ ಅನಿಸಿತು. ಅದಾವ ವರದಿಗಾರ ಮಹಾಶಯ ಹೀಗೆ ವರದಿ ಮಾಡಿದ್ದಾನೆ ಎಂದುಕೊಂಡು ಮೊದಲು ಮರುಕಪಟ್ಟಿದ್ದು ಆ ವರದಿಗಾರನ ಬಗ್ಗೆ. ಸರಿಯಾದ ಹಾಗೂ ನಂಬಲರ್ಹವಾದ ಸುದ್ದಿ ಮೂಲವೂ ಇಲ್ಲದೇ ಹೀಗೆ ವರದಿ ಮಾಡಿದ ಪತ್ರಕರ್ತನ ಬಗ್ಗೆ ಮರುಕಪಟ್ಟೆ. ಅಂಥದೊಂದು ಸುದ್ದಿಯನ್ನು ಪ್ರಸಾರ ಮಾಡಿದ ಚಾನಲ್ ಅನ್ನು ದೆಹಲಿಯಲ್ಲಿ ತಂಗಿದ್ದ ಕೋಣೆಯಲ್ಲಿದ್ದ ಟೆಲಿವಿಷನ್ ಸೆಟ್ ಟಾಪ್ ಬಾಕ್ಸ್ ನಲ್ಲಿ ಜಾಲಾಡಿ ಹುಡುಕಿ ನೋಡಿದೆ. ಆ ಸುದ್ದಿಯೇ ನನಗೆ ಒಂದು "ಜೋಕ್" ಎನಿಸಿತು.

ಎತ್ತ ಸಾಗಿದೆ ಈ ಪತ್ರಿಕೋದ್ಯಮ ಹಾಗೂ ಟೆಲಿವಿಷನ್ ಮಾಧ್ಯಮ ಅಂತಾ ಕೂಡ ಬೇಸರವಾಯಿತು. ಚಾನಲ್ಲೊಂದು ಪ್ರಸಾರ ಮಾಡಿದ ಆ ಸುಳ್ಳು ಸುದ್ದಿಯ ವಿಷಯ ಹಾಳಾಗಿ ಹೋಗಲಿ; ನಾನು ಮೆಚ್ಚಿಕೊಂಡು ಓದುವ ದೊಡ್ಡ ಪತ್ರಿಕೆಯೊಂದು ಕೂಡ ಇಂಥದೊಂದು ಸುದ್ದಿಯನ್ನು ಬಾಕ್ಸ್ ಮಾಡಿ ಮೊದಲ ಪುಟದಲ್ಲಿ "ಕಾಂಗ್ರೆಸ್ ಶಾಸಕ ನಾಪತ್ತೆ...?" ಎನ್ನುವ ತಲೆಬರಹ ನೀಡಿದ್ದು ಮಾತ್ರ ಮನಸ್ಸಿಗೆ ನೋವುಂಟುಮಾಡಿತು. ನಾನು ನಂಬಿಕೊಂಡು ಅತ್ಯಂತ ವಿಶ್ವಾಸಾರ್ಹ ಸುದ್ದಿ ಪ್ರಕಟಿಸುವ ಪತ್ರಿಕೆಯೆಂದು ಭರವಸೆ ಇಟ್ಟುಕೊಂಡಿದ್ದ ಪತ್ರಿಕೆಯಲ್ಲಿಯೇ ಇಂಥದೊಂದು ಪ್ರಮಾದ ನಡೆಯಿತಲ್ಲಾ ಎಂದು ನೊಂದುಕೊಂಡೆ. ಏಕೆಂದರೆ ನಾನು ಮಾತ್ರವಲ್ಲ ನನ್ನ ತಂದೆಯ ಕಾಲದಿಂದಲೂ ಅಭಿಮಾನದಿಂದ ಓದುತ್ತಾ ಬಂದಿರುವ ಪತ್ರಿಕೆಯದು. ಅದರಲ್ಲಿಯೂ ಇಂಥದೊಂದು ತಪ್ಪು ಸುದ್ದಿ ಪ್ರಕಟವಾಗಿದ್ದು ನನಗೆ ಸಹನೀಯ ಎನಿಸಲಿಲ್ಲ. ನಾನು ಸಾಕಷ್ಟು ಬಾರಿ ಪತ್ರಿಕಾ ಪ್ರಕಟಣೆ ಕಳುಹಿಸಿ, ನನ್ನ ಪರ್ಸನಲ್ ನಂಬರ್ ಕೂಡ ಈ ಪತ್ರಿಕೆಯ ಮುಖ್ಯ ವರದಿಗಾರರಿಗೆ ಕಳುಹಿಸಿದ್ದೇನೆ. ಅವರು ಒಂದು ಬಾರಿ ನನ್ನನ್ನು ಸಂಪರ್ಕಿಸಿ ಈ ವಿಷಯವನ್ನು ಖಚಿತಮಾಡಿಕೊಳ್ಳಬಹುದಿತ್ತು; ಹಾಗೆ ಏಕೆ ಮಾಡಲಿಲ್ಲ? ಎನ್ನುವ ಪ್ರಶ್ನೆಯಂತೂ ಈಗಲೂ ನನ್ನನ್ನು ಕಾಡುತ್ತಿದೆ.

ಪತ್ರಿಕೆಯಲ್ಲಿ ಪ್ರಕಟವಾದ ಹಾಗೂ ಚಾನಲ್ ನಲ್ಲಿ ಮೂಡಿದ ನಾನು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತಿದ್ದೇನೆ ಎನ್ನುವ ಸುದ್ದಿಯು ಪ್ರಸಾರವಾದ ಸಂದರ್ಭದಲ್ಲಿ ನಾನು ನವದೆಹಲಿಯಲ್ಲಿ ಇದ್ದೆ. ನನ್ನ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಮಂಜೂರಾತಿಯಿಂದ ಕೆಲವು ಕೆಲಸಗಳು ಆಗಬೇಕಿತ್ತು. ಅದಕ್ಕಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಕಚೇರಿಗಳಿಗೆ ಎಡತಾಕುತ್ತಿದ್ದೆ. ಆ ಕಾಲದಲ್ಲಿ ರಾಜ್ಯದಲ್ಲಿ ಆಗುತ್ತಿದ್ದ ರಾಜಕೀಯ ಬೆಳವಣಿಗೆಗಳ ಬಗ್ಗೆ ಯೋಚಿಸುವುದಕ್ಕೆ ನಾನು ಮಹತ್ವವನ್ನೂ ನೀಡಿರಲಿಲ್ಲ. ಏಕೆಂದರೆ ನನ್ನ ಮೇಲೆ ವಿಶ್ವಾಸವನ್ನಿಟ್ಟು ಆಯ್ಕೆಮಾಡಿ ಕಳುಹಿಸಿದ ನನ್ನ ಕುಣಿಗಲ್ ವಿಧಾನಸಭಾ ಕ್ಷೇತ್ರದ ಜನರ ಕೆಲಸ ನನಗೆ ಮುಖ್ಯವಾಗಿತ್ತು. ಆ ಕೆಲಸಗಳನ್ನು ಮಾಡಿಸಿಕೊಳ್ಳಲು ಬೆಳಿಗ್ಗೆಯಿಂದ ಮನವಿ ಪತ್ರವನ್ನು ಹಿಡಿದು ವಿವಿಧ ಕಚೇರಿಗಳಿಗೆ ಅಲೆಯುತ್ತಿದ್ದೆ. ಜನರಿಗಾಗಿ ಕೆಲಸ ಮಾಡುವುದು ನನಗೆ ತೃಪ್ತಿ ನೀಡುತ್ತದೆ. ಅದರ ಬದಲಿಗೆ ಕುತಂತ್ರದ ರಾಜಕೀಯ ಮಾಡಿಕೊಂಡು ಕಾಲಕಳೆಯುವುದು ನನಗೆ ಇಷ್ಟವಾಗದು.

ನನ್ನದು ಏನಿದ್ದರೂ "ಅಭಿವೃದ್ಧಿಪರ ರಾಜಕೀಯ". ಆ ನಿಟ್ಟಿನಲ್ಲಿ ಮಾತ್ರ ಗಮನವಿಟ್ಟು ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಹೀಗೆ ಅಭಿವೃದ್ಧಿ ವಿಷಯವಾಗಿ ಚರ್ಚೆ ಮಾಡಲು ಕೂಡ ನಾನು ಅನೇಕ ಬಾರಿ ನಮ್ಮ ಜಿಲ್ಲೆ(ತುಮಕೂರು)ಯ ಹಿಂದಿನ ಉಸ್ತುವಾರಿ ಸಚಿವರಾಗಿದ್ದ ಎಸ್. ಸುರೇಶ್ ಕುಮಾರ್ ಅವರನ್ನು ಕೂಡ ಭೇಟಿಯಾಗಿದ್ದಿದೆ. ಆದರೆ ಅದರಲ್ಲಿ ಯಾವುದೇ ರಾಜಕೀಯವಿಲ್ಲ. ನನ್ನ ಜನರ ಕೆಲಸ ಮಾಡಿಸಿಕೊಳ್ಳಲು ಮಾತ್ರ ನಡೆದ ಭೇಟಿಗಳವು. ಆದ್ದರಿಂದ ಅದಕ್ಕೆ ಬೇರೆ ಅರ್ಥವನ್ನು ನೀಡುವ ಅಗತ್ಯವೂ ಇಲ್ಲ. ಇಂಥ ಕೆಲವು ಘಟನೆಗಳನ್ನು ಮುಂದಿಟ್ಟುಕೊಂಡು ಕೆಲವರು ಪಕ್ಷಾಂತರ ಮಾಡುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು ಹಾಸ್ಯಾಸ್ಪದ. ಅಂಥ ಕುತಂತ್ರ ಮಾಡಿದವರಿಗೆ ನಾನು ಇಲ್ಲಿ ನೇರವಾಗಿ, ದಿಟ್ಟವಾಗಿ ಹಾಗೂ ನಿರಂತರವಾಗಿ ಒಂದು ಉತ್ತರವನ್ನು ನೀಡಲು ಬಯಸುತ್ತೇನೆ. ನಾನು ಹೆತ್ತಮ್ಮನನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎನ್ನುವುದೇ ನನ್ನ ದಿಟ್ಟ ಉತ್ತರ!

ಕಾರ್ಯಕರ್ತರ ನಡುವೆ ಇರುವ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ದುಡಿಯಲು ಮಾತ್ರ ಬಯಸುವ ನಾನು ಅದಕ್ಕಾಗಿ ಎಲ್ಲ ಮಟ್ಟದಲ್ಲಿ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ನನ್ನ ಕ್ಷೇತ್ರವಾದ ಕುಣಿಗಲ್ ಅನ್ನು ನಿರ್ಲಕ್ಷಿಸಿಕೊಂಡು ಬಂದಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಲ್ಲಿ ಆಗಬೇಕಾದ ಕಾಮಗಾರಿಗಳ ಕುರಿತು ಕೂಡ ವಿನಂತಿ ಮಾಡುತ್ತಲೇ ಇದ್ದೇನೆ. ಆದರೂ ಕಾಂಗ್ರೆಸ್ ಶಾಸಕನಾದ ನನ್ನ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರವು ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅಷ್ಟಾಗಿ ಅಸಕ್ತಿ ತೋರುತ್ತಿಲ್ಲ. ಅದು ನನ್ನನ್ನು ಈಗಲೂ ಅಸಮಾಧಾನಗೊಳಿಸಿದೆ. ನನ್ನಿಂದ ರಾಜ್ಯ ಸರ್ಕಾರಕ್ಕೆ ಹೋಗಿರುವ ಅನೇಕ ಅರ್ಜಿಗಳು ಹಾಗೂ ಮನವಿ ಪತ್ರಗಳು ಹಾಗೂ ಆಕ್ಷೇಪಗಳು ಯಾವುದೇ ಸರಿಯಾದ ಉತ್ತರವಿಲ್ಲದೆಯೇ ಹಾಗೆಯೇ ನೆನೆಗುದಿಗೆ ಬಿದ್ದಿವೆ. ಇದಕ್ಕಾಗಿ ನಾನು ಬಿಜೆಪಿ ಸರ್ಕಾರದ ವರ್ತನೆಯನ್ನು ಆಕ್ಷೇಪಿಸುತ್ತಲೇ ಬಂದಿದ್ದೇನೆ.

ಈ ವಿಷಯವಾಗಿ ಜಿಲ್ಲಾ ಮಟ್ಟದ ಅಭಿವೃದ್ಧಿ ಪರಿಶೀಲನಾ ಸಭೆಗಳಲ್ಲಿ ಅನೇಕ ಬಾರಿ ಧ್ವನಿ ಎತ್ತಿದ್ದೇನೆ. ಜನರನ್ನು ಒಗ್ಗೂಡಿಸಿಕೊಂಡು ಬೀದಿಗಿಳಿದು ಹೋರಾಟ ಮಾಡುವ ನಾಟಕವನ್ನು ಮಾಡುವುದು ನನಗೆ ಇಷ್ಟವಿಲ್ಲ. ಶಾಂತರೀತಿಯಲ್ಲಿ ನನ್ನ ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು, ಜನರಿಗೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ನನ್ನ ಆಶಯ ಹಾಗೂ ನಂಬಿಕೆ. ಆದ್ದರಿಂದ ನಾನು ಬೀದಿಗೆ ಇಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ನನ್ನ ಕ್ಷೇತ್ರದ ಜನರನ್ನು ಅನಗತ್ಯವಾಗಿ ಸಂಕಷ್ಟದಲ್ಲಿ ಸಿಲುಕಿಸುವ ದುಸ್ಸಾಹಸವನ್ನೂ ಎಂದೂ ಮಾಡಿಲ್ಲ. ಹಾಗೆಂದು ನನ್ನ ಈ ಸಭ್ಯ ವರ್ತನೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದೂ ಸರಿಯಲ್ಲ. ಜನರ ಪ್ರತಿನಿಧಿಯಾಗಿ ನಾನು ಅವರ ಪರವಾಗಿ ಹೋರಾಡುವುದು ನನ್ನ ಕರ್ತವ್ಯ. ಅದರ ಬದಲು ಜನರನ್ನು ಮುಂದೆ ಬಿಟ್ಟು ನಾನು ಹಿಂದೆ ಉಳಿಯುವುದು ನಾಯಕನ ಗುಣವೂ ಅಲ್ಲ. ನಮ್ಮ ಕಾಂಗ್ರೆಸ್ ಇತಿಹಾಸವು ಜನರಿಗಾಗಿ ತಾವೇ ಮುಂದೆ ನಿಂತು ಹೋರಾಟಮಾಡಿದ ದೊಡ್ಡ ನಾಯಕರನ್ನು ಹೊಂದಿದ ಪಕ್ಷ. ಅಂಥ ಮಹಾನ್ ಜನನಾಯಕರನ್ನು ಕಂಡ ಪಕ್ಷದ ಆದರ್ಶಗಳನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ಪಕ್ಷಾಂತರಕ್ಕೂ ನನ್ನ ಬಲವಾದ ವಿರೋಧವಿದೆ. ಪಕ್ಷಾಂತರವನ್ನು ವಿರೋಧಿಸುವ ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೊಂದು ಪಾರ್ಟಿಗೆ ಹೋಗುತ್ತೇನೆ ಎಂದು ಕನಸಿನಲ್ಲಿಯೂ ಯಾರೂ ಯೋಚನೆ ಮಾಡುವ ಅಗತ್ಯವಿಲ್ಲ.

ಕಾಂಗ್ರೆಸ್ ನನ್ನ ಹೆತ್ತತಾಯಿ. ರಾಜಕೀಯ ಕ್ಷೇತ್ರದಲ್ಲಿ ನಾನು ಕೂಸಾಗಿ ಕಣ್ಣು ಬಿಟ್ಟಿದ್ದೇ ಕಾಂಗ್ರೆಸ್ ಪಕ್ಷದಲ್ಲಿ. ಆದ್ದರಿಂದ ಈ ಪಕ್ಷವೇ ನನ್ನ ಹೆತ್ತಮ್ಮ. ಹೋರಾಟದ ಹಾದಿಯಲ್ಲಿ ನಡೆಯುವುದನ್ನು ಕಲಿಸಿದ ಹಾಗೂ ಜನಸೇವೆಗಾಗಿ ಯೋಚನೆ ಮಾಡುವ ಮತ್ತು ದುಡಿಯುವ ಪಾಠವನ್ನು ಕಲಿಸಿದ ಮೊದಲ ಗುರುವೂ ಹೌದು. ಸೋಲಿನ ಕಹಿಯನ್ನು ಉಂಡಾಗ ಸಾಂತ್ವನ ಹೇಳಿದ ಹಾಗೂ ಗೆದ್ದು ಸಂಭ್ರಮಿಸಿದಾಗ ಜನರ ಹಿತಕ್ಕಾಗಿ ಸ್ಪಂದಿಸುವಂತೆ ಸರಿಯಾದ ದಾರಿ ತೋರಿಸಿದ ಈ ಮಹಾತಾಯಿಯನ್ನು ಎಂದೂ ಬಿಟ್ಟು ಹೋಗಲು ಸಾಧ್ಯವಿಲ್ಲ. ನಾನು ಹಾಗೆ ಮಾಡುತ್ತೇನೆ ಎಂದು ಸುಳ್ಳು ಸುದ್ದಿ ಹರಡಿದ ಎಲ್ಲರಿಗೂ ಇದೇ ನಾನು ನೀಡುವ ದಿಟ್ಟ ಉತ್ತರ. ಆದ್ದರಿಂದ ಇನ್ನು ಮುಂದಾದರೂ ನನ್ನ ಬಗ್ಗೆ ಹೀಗೆ ಸುದ್ದಿ ಪ್ರಕಟಿಸುವ ಮುನ್ನ ಪ್ರಜ್ಞಾವಂತರಾದ ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರು ಒಮ್ಮೆ ಯೋಚನೆ ಮಾಡಬೇಕು. ನನ್ನ ಬಗ್ಗೆ ಸಲ್ಲದ ಸುದ್ದಿಯನ್ನು ನೀಡುವ ಮೂಲಕ ಸುದ್ದಿ ಮಿತ್ರರ ದಾರಿ ತಪ್ಪಿಸಲು ಯತ್ನಿಸುವ ಸುದ್ದಿ ಮೂಲಗಳ ಬಗ್ಗೆಯೂ ವಿವೇಚನೆಯುಳ್ಳ ಪತ್ರಕರ್ತರು ಒಮ್ಮೆ ಯೋಚನೆ ಮಾಡಬೇಕೆಂದು ಕೋರುತ್ತೇನೆ.

ಮಾವುತ "ಖುದ್ದೂಸ್"ನಿಂದ "ಗಜೇಂದ್ರ" ಆನೆಯನ್ನು ದೂರಮಾಡಿದ ಅಧಿಕಾರಿಗಳು



ಅನುಭವಿ ಮಾವುತ ಖುದ್ದೂಸ್ ಅವರಿಂದ ಸುಮಾರು ಒಂದು ವರ್ಷ "ಗಜೇಂದ್ರ" ಆನೆಯನ್ನು ದಸರಾಕ್ಕಾಗಿ ಸಜ್ಜು ಮಾಡಿಸಿಕೊಂಡ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಆನಂತರ ನಿರ್ದಯವಾಗಿ ಆನೆಯಿಂದ ಈ ಮಾವುತನನ್ನು ದೂರ ಮಾಡುವಂಥ ಕ್ರೂರತನ ಪ್ರದರ್ಶಿಸಿದ್ದಾರೆ. ಇದರಿಂದಾಗಿ ಈಗ ಮಾವುತ ಖುದ್ದೂಸ್ ನೊಂದುಕೊಂಡು ನಿತ್ಯವೂ ಕಣ್ಣೀರಿಡುತ್ತಿದ್ದಾರೆ. ಇದು ಮಾವುತನ ಸ್ಥಿತಿ; ಅದೇ ಮಾವುತನಿಂದ ದೂರವಾದ "ಗಜೇಂದ್ರ" ಆನೆಗೆಷ್ಟು ತಳಮಳ ಆಗಿದೆ ಎಂದು ಬಲ್ಲವರು ಯಾರು? ಮಾತೇನಾದರೂ ಬರುತ್ತಿದ್ದರೆ ಖಂಡಿತವಾಗಿಯೂ "ಗಜೇಂದ್ರ" ಆನೆಯು ತಾನು ಮಾವುತನಿಂದ ದೂರವಾದ ವೇದನೆಯನ್ನು ಹೇಳಿಕೊಳ್ಳುತ್ತಿತ್ತೇನೋ!?

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪಟ್ಟದ ಆನೆಯಾಗಿ ವಿಜೃಂಭಿಸುತ್ತಿರುವ "ಗಜೇಂದ್ರ" ಆನೆಯನ್ನು ತನ್ನ ಮಾವುತನ ಸಾಮಿಪ್ಯದಿಂದ ದೂರ ಮಾಡಲಾಗಿದೆ. ಇದಕ್ಕಿಂತ ಹೀನಾಯ ಹಾಗೂ ಹೃದಯಹೀನ ಕೃತ್ಯ ಇನ್ನೊಂದು ಇದೆಯೇ?

ದಸರಾ ಚಟುವಟಿಕೆಗಳಲ್ಲಿ ಭಾಗವಹಿಸುವ ಉದ್ದೇಶದಿಂದ ಬಿಳಿಗಿರಿರಂಗ ದೇವಸ್ಥಾನ ಅಭಯಾರಣ್ಯಕ್ಕೆ ಒಳಪಡುವ ಕೆ.ಗುಡಿ(ಕ್ಯಾತೇಶ್ವರ ಗುಡಿ)ಯಿಂದ ಮೊದಲ ತಂಡದಲ್ಲಿ ಮೈಸೂರಿಗೆ ಬಂದಿರುವ 56 ವರ್ಷ ವಯಸ್ಸಿನ "ಗಜೇಂದ್ರ" ಆನೆಯು ತನ್ನ ಮಾವುತನಾದ ಖುದ್ದೂಸ್ ಅವರಿಂದ ದೂರವಾಗಿದೆ.

ಅನುಭವಿ ಖುದ್ದೂಸ್ ಅವರು ದಸರಾ ಉದ್ದೇಶಕ್ಕಾಗಿಯೇ ಕಳೆದ ಒಂದು ವರ್ಷದಿಂದ "ಗಜೇಂದ್ರ" ಆನೆಯನ್ನು ತಯಾರಿ ಮಾಡಲು ಬೆವರು ಸುರಿಸಿದ್ದಾರೆ. ಆದರೆ ಅವರ ಶ್ರಮವನ್ನೆಲ್ಲಾ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು. ಸಲ್ಲದ ಆರೋಪವನ್ನು ಮಾಡುವ ಮೂಲಕ ವಿನಾ ಕಾರಣವಾಗಿ ಖದ್ದೂಸ್ ಅವರನ್ನು "ಗಜೇಂದ್ರ" ಆನೆಯಿಂದ ದೂರಮಾಡಿದ್ದಾರೆ.

"ಗಜೇಂದ್ರ" ಆನೆಯೊಂದಿಗೆ ಸುಮಾರು ಹನ್ನೊಂದು ತಿಂಗಳಿಂದ ಆತ್ಮೀಯತೆಯಿಂದ ಇದ್ದ ಖುದ್ದೂಸ್ ಅವರನ್ನು ದಸರಾ ಹತ್ತಿರ ಬಂದಾಗಲೇ ಅದರಿಂದ ದೂರಮಾಡಲಾಗಿದೆ. ಹಿರಿಯ ಮಾವುತರಾದ ಖುದ್ದೂಸ್ ಅವರ ಬದಲಿಗೆ ಬೇರೆಯವರನ್ನು ಈ ಆನೆಯ ಮಾವುತರನ್ನಾಗಿ ಕೊನೆಯ ಕ್ಷಣದಲ್ಲಿ ನೇಮಕ ಮಾಡಲಾಗಿದೆ. ಹೀಗೆ ಮಾಡುವ ಮೂಲಕ ವರ್ಷಪೂರ್ತಿ ಶ್ರಮಿಸಿ, ಆನೆಯನ್ನು ಸಜ್ಜುಗೊಳಿಸಿದ ಪರಿಣತ ಮಾವುತ ಖುದ್ದೂಸ್ ಅವರಿಗೆ ಅನ್ಯಾಯ ಮಾಡಲಾಗಿದೆ.

"ಗಜೇಂದ್ರ" ಆನೆಗೆ ಖುದ್ದೂಸ್ ಮಾವುತ ಆಗಿದ್ದು ಹೀಗೆ:

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ "ನಾಗರಹೊಳೆ ಆನೆ ಶಿಬಿರ"ದಿಂದ 2009ರ ಫೆಬ್ರುವರಿಯಲ್ಲಿ ಆನೆ ಸಫಾರಿಯ ಉದ್ದೇಶಕ್ಕಾಗಿಯೇ ವರ್ಗಾವಣೆಗೊಂಡ "ಗಜೇಂದ್ರ" ಆನೆಯು ಕೆ.ಗುಡಿಗೆ ಬಂದಿತ್ತು. ಈ ಆನೆಗೆ ಬಹು ವರ್ಷಗಳಿಂದ ಕಾವಾಡಿ ಆಗಿದ್ದ ಗಣಪತಿ ಎನ್ನುವವರ ಜೊತೆಯಲ್ಲಿ ಕಂಠಾಪುರ ಶಿಬಿರದ ರಾಮಾ ಎನ್ನುವ ಮಾವುತನನ್ನು ಕೂಡ ವರ್ಗ ಮಾಡಲಾಗಿತ್ತು.

2009ರ ಮೇ ತಿಂಗಳಿನಲ್ಲಿ ಕಾಡಾನೆಯನ್ನು ಹಿಡಿಯಲು ತೆರಳಿದ "ಗಜೇಂದ್ರ" ಆನೆಯು ಕೆ.ಗುಡಿ ಶಿಬಿರಕ್ಕೆ ಮರಳಿದಾಗ ಮಾವುತ ರಾಮ ಅವರ ನಿರ್ಲಕ್ಷ್ಯದಿಂದ ಶಕ್ತಿ ಕುಂದಿ ಹೋಗಿತ್ತು. ಅದೇ ಸಂದರ್ಭದಲ್ಲಿ ಮಾವುತ ರಾಮ ಅವರು ಕುಡಿದ ಮತ್ತಿನಲ್ಲಿ ಬಂದು ಕೆ.ಗುಡಿ ಆನೆ ಶಿಬಿರದಲ್ಲಿ ದಾಂದಲೆ ಮಾಡಿದ್ದರು. ಈ ಘಟನೆಗೆ ಗಾರ್ಡುಗಳು, ವಾಚರುಗಳು ಹಾಗೂ ಅದೇ ಶಿಬಿರದಲ್ಲಿನ ಮಾವುತರು ಮತ್ತು ಕಾವಾಡಿಗಳು ಅಷ್ಟೇ ಅಲ್ಲ; ಕೆ.ಗುಡಿಯಲ್ಲಿಯೇ ನೆಲೆಸಿರುವ ಕೆಲವು ಅರಣ್ಯ ಇಲಾಖೆ ಸಿಬ್ಬಂದಿಯ ಕುಟುಂಬದವರೂ ಸಾಕ್ಷಿಯಾಗಿದ್ದಾರೆ.

2009ರ ದಸರಾ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿಯೂ ತಿಂಗಳುಗಳ ಕಾಲ ಪ್ರತಿನಿತ್ಯ ಕುಡಿದ ಮತ್ತಿನಲ್ಲಿ ಇರುವ ಮೂಲಕ ಇದೇ ಮಾವುತ ರಾಮ ಅವರು ಅರಣ್ಯ ಇಲಾಖೆಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ದಸರಾ ಕಳೆದ ನಂತರ ಪುನಃ ಕೆ.ಗುಡಿಗೆ ಬಂದ "ಗಜೇಂದ್ರ" ಆನೆಗೆ ಅರಣ್ಯ ಇಲಾಖೆ ಸೂಕ್ತ ಮಾವುತ ಅಗತ್ಯವೆಂದು ಯೋಚಿಸಿದರು. ಆಗ ಆಯ್ಕೆ ಮಾಡಿದ್ದು ಅದೇ ಶಿಬಿರದಲ್ಲಿದ್ದ ಹಿರಿಯ ಮಾವುತ ಖುದ್ದೂಸ್ ಅವರನ್ನು. ಖುದ್ದೂಸ್ ಅವರನ್ನು ಈ ಹಿಂದೆ ಇದ್ದ ಮಾವುತ ರಾಮ ಅವರ ಬದಲಿಗೆ "ಗಜೇಂದ್ರ"ನನ್ನು ನೋಡಿಕೊಳ್ಳುವ ಕೆಲಸಕ್ಕೆ ನೇಮಕ ಮಾಡಲಾಯಿತು.

"ಮಸ್ತ್" ಸ್ಥಿತಿಯಲ್ಲಿದ್ದ ಗಜೇಂದ್ರ ಆನೆ ಸೇವೆ ಮಾಡಿದ ಖುದ್ದೂಸ್:

2009ರ ನವೆಂಬರ್ ತಿಂಗಳಿನಲ್ಲಿ "ಮಸ್ತ್" (ಮಸ್ತಿ) ಸ್ಥಿತಿಯಲ್ಲಿದ್ದ "ಗಜೇಂದ್ರ" ಆನೆಯ ಹೊಣೆಯನ್ನು ಖುದ್ದೂಸ್ ಅವರಿಗೆ ನೀಡಲಾಗಿತ್ತು. ಆದರೆ ಆನೆಗಳ ಬಗ್ಗೆ ಸಹಜವಾಗಿಯೇ ಮಮಕಾರ ಹೊಂದಿರುವ ಸಹೃದಯಿ ಮಾವುತ ಖುದ್ದೂಸ್ ಅವರು ಹಿಂದೇಟು ಹಾಕದೇ ಆನೆಯನ್ನು ನಿರ್ವಹಿಸುವ ಹೊಣೆಯನ್ನು ಹೊತ್ತುಕೊಂಡರು. ಅಷ್ಟೇ ಅಲ್ಲ ತಮಗೆ ವಹಿಸಿದ್ದ "ಗಜೇಂದ್ರ" ಆನೆಯನ್ನು ಸಮರ್ಥವಾಗಿಯೂ ನಿಭಾಯಿಸಿದರು.

ಸಾಮಾನ್ಯವಾಗಿ ಆನೆ ಶಿಬಿರಗಳಲ್ಲಿ "ಮಸ್ತ್" ಸ್ಥಿತಿಯಲ್ಲಿರುವ ಗಂಡಾನೆಯನ್ನು ಕಟ್ಟಿಹಾಕಿ ಮೇವು ಹಾಕಲಾಗುತ್ತದೆ. ಬೇರೆ ಗಂಡಾನೆಗಳ ಜೊತೆಯಲ್ಲಿ ಸದಾ ಕಾದಾಟಕ್ಕೆ ನಿಲ್ಲುವ ಹಾಗೂ ಹೆಣ್ಣಾನೆಗಳಿಗೆ ಆಕರ್ಷಿತವಾಗಿ ಮೈಲುಗಟ್ಟಲೆ ನಡೆಯುವ ಇಂಥ ಆನೆಯನ್ನು ಪ್ರತಿ ನಿತ್ಯವೂ ಸಹಜ ಪರಿಸರದಲ್ಲಿ ಮೇಯುವುದಕ್ಕೆ ಬಿಟ್ಟು ಕಾಳಜಿ ಮಾಡುವ ಕೆಲಸವನ್ನು ಖುದ್ದೂಸ್ ಮಾಡಿದ್ದಾರೆ. ಆನೆಯನ್ನು ಮುಕ್ತ ಪರಿಸರದಲ್ಲಿ ಬಿಟ್ಟು ಅದರ ಮನವನ್ನು ತಣಿಸುವುದು ಸಾಹಸದ ಕೆಲಸವೇ ಆಗಿದೆ. ಅಂಥ ಸಾಹಸವನ್ನು ಮಾವುತ ಖುದ್ದೂಸ್ ಅವರು ಮಾಡಿದ್ದಾರೆ.

ಅದೇ ಸಮಯದಲ್ಲಿಯೇ "ಗಜೇಂದ್ರ" ಆನೆ ಹಾಗೂ ಮಾವುತ ಖುದ್ದೂಸ್ ಅವರ ನಡುವಣ ಸಂಬಂಧವು ಬಲವಾಗಿದ್ದು. ಆನೆಯ ಜೊತೆಗೆ ಖುದ್ದೂಸ್ ಅವರು ಒಳ್ಳೆಯ ರೀತಿಯ ಸಂವಹನವನ್ನು ಸಾಧಿಸುವಲ್ಲಿಯೂ ಯಶಸ್ವಿಯಾಗಿದ್ದರು. ಮಸ್ತ್ ಸ್ಥಿತಿಯಲ್ಲಿದ್ದ "ಗಜೇಂದ್ರ" ಆನೆಯನ್ನು ಮಾವುತ ಖುದ್ದೂಸ್ ಅವರು ಕಟ್ಟಿ ಹಾಕದೇ, ತಮ್ಮ ನಿಗಾದಲ್ಲಿ ಮುಕ್ತವಾಗಿ ಕಾಡಿನಲ್ಲಿ ಓಡಾಡುವಂತೆ ಮಾಡಿದ್ದರು. ಅದರ ಪರಿಣಾಮವಾಗಿ ಮಸ್ತ್ ಸ್ಥಿತಿಯಲ್ಲಿದ್ದರೂ "ಗಜೇಂದ್ರ" ಆನೆಯು ಮಾವುತ ಖುದ್ದೂಸ್ ಅವರೊಂದಿಗೆ ಸಹನೆಯಿಂದ ಇರುತ್ತಿತ್ತು.

2010ರ ಏಪ್ರಿಲ್ ತಿಂಗಳಿನಲ್ಲಿ ಹಾಸನದ ಆಲೂರು ಅರಣ್ಯ ವಲಯದಲ್ಲಿನ "ಆಪರೇಷನ್ ಮಾಗಡಿ ಹಳ್ಳಿ" ಕಾರ್ಯಾಚರಣೆಯಲ್ಲಿ ಎರಡು ಕಾಡಾನೆಗಳನ್ನು ಹಿಡಿಯಲು ಪ್ರಮುಖ ಪಾತ್ರವಹಿಸಿದ "ಗಜೇಂದ್ರ" ಆನೆಯನ್ನು ಆಗ ನಿರ್ವಹಿಸಿದ್ದು ಕೂಡ ಇದೇ ಮಾವುತರಾದ ಖುದ್ದೂಸ್ ಅವರು ಎನ್ನುವುದನ್ನು ಮರೆಯುವಂತಿಲ್ಲ.

ಮಾವುತ ಖುದ್ದೂಸ್ ಅವರಿಗೆ ಅನ್ಯಾಯ:

ಸುಮಾರು ಒಂದು ವರ್ಷದ ಅವಧಿಯಲ್ಲಿ "ಗಜೇಂದ್ರ" ಆನೆಯನ್ನು ಕಾಳಜಿಯಿಂದ ನೋಡಿಕೊಂಡು ಉತ್ತಮ ಸೇವೆ ಮಾಡಿದ ಮಾವುತ ಖುದ್ದೂಸ್ ಅವರನ್ನು ಈ ಬಾರಿಯ ದಸರಾಕ್ಕೆ ಮುನ್ನವೇ ಸಲ್ಲದ ಆರೋಪ ಹೊರಿಸಿ, ಆನೆಯಿಂದ ದೂರ ಮಾಡಲಾಗಿದೆ. ವರ್ಷಪೂರ್ತಿ "ಗಜೇಂದ್ರ" ಆನೆಯನ್ನು ನೋಡಿಕೊಳ್ಳುವಾಗ ಮಾವುತ ಖುದ್ದೂಸ್ ಅವರ ನಡವಳಿಕೆಯ ಬಗ್ಗೆ ಒಂದು ಮಾತೂ ಆಡದ ಅರಣ್ಯ ಇಲಾಖೆ ಅಧಿಕಾರಿಗಳು ದಸರಾ ಹತ್ತಿರಕ್ಕೆ ಬಂದಾಗಲೇ ಧ್ವನಿ ಬದಲಾಯಿಸಿದರು.

"ಗಜೇಂದ್ರ" ಆನೆಯ ಮಾವುತ ಖುದ್ದೂಸ್ ಅವರಿಗೆ ಒಂದು ಮಾತು ಕೂಡ ಕೇಳದೆಯೇ ಆನೆಯನ್ನು ದಸರಾಕ್ಕೆ ಮೊದಲ ಬ್ಯಾಚಿನಲ್ಲಿಯೇ ತೆಗೆದುಕೊಂಡು ಹೋಗಲಾಯಿತು. ವಿಚಿತ್ರವೆಂದರೆ ಹಿಂದೆ ಮತ್ತಿನಲ್ಲಿ ದಾಂದಲೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳ ಕೋಪಕ್ಕೆ ಗುರಿಯಾಗಿದ್ದ ಮಾವುತ ರಾಮ ಅವರಿಗೇ ಮತ್ತೆ "ಗಜೇಂದ್ರ" ಆನೆಯನ್ನು ವಹಿಸಲಾಗಿದೆ. ಇನ್ನೊಂದು ಗಮನಿಸುವ ಅಂಶವೆಂದರೆ ಮಾವುತ ರಾಮ ಅವರಿಗೆ ಆರೋಗ್ಯ ತೊಂದರೆಯೂ ಇದೆ. ರಾಮ ಅವರು ಪೀಟ್ಸ್ (ಎಪಿಲೆಪ್ಸಿ) ತೊಂದರೆ ಹೊಂದಿದ್ದಾರೆ ಎನ್ನಲಾಗಿದೆ. ಈ ಅಂಶವನ್ನು ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ಮರೆತಂತಿದೆ. ಆನೆಯನ್ನು ನಿರ್ವಹಿಸುವಾಗ ಈ ರೋಗ ತೊಂದರೆಯು ಕಾಡಿದರೆ ಆನೆಯು ಜನಜಂಗುಳಿಯ ನಡುವೆ ನಿಯಂತ್ರಣ ತಪ್ಪಿ ಹೋಗಬಹುದು ಎನ್ನುವುದನ್ನು ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ಯೋಚನೆ ಮಾಡಿಲ್ಲವೆಂದು ಅನಿಸುತ್ತದೆ.

ಅಗತ್ಯ ಇದ್ದಾಗ ಮಾತ್ರ ಖುದ್ದೂಸ್ ಬೇಕು:

ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆನೆಗಳ ವಿಷಯದಲ್ಲಿ ಸಂಕಷ್ಟಗಳು ಎದುರಾದಾಗ ಮಾತ್ರ ಅನುಭವಿ ಮಾವುತ ಖುದ್ದೂಸ್ ಬೇಕಾಗುತ್ತದೆ. ತಮ್ಮ ಕೆಲಸ ಮುಗಿದ ನಂತರ ಇದೇ ಮಾವುತ ಖುದ್ದೂಸ್ ಅವರನ್ನು ನಿರ್ಲಕ್ಷಿಸಲಾಗುತ್ತದೆ. ಮಸ್ತ್ ಸ್ಥಿತಿಯಲ್ಲಿದ್ದ "ಗಜೇಂದ್ರ" ಆನೆಯನ್ನು ನಿಭಾಯಿಸುವುದಕ್ಕೆ ಮಾವುತ ಖುದ್ದೂಸ್ ಬೇಕಾಯಿತು. ಆದರೆ ಅದೇ ದಸರಾಕ್ಕೆ "ಗಜೇಂದ್ರ" ಆನೆಯನ್ನು ತೆಗೆದುಕೊಂಡು ಹೋಗುವಾಗ ಮಾವುತ ಖುದ್ದೂಸ್ ಬೇಡವಾದರು! ಹೇಗಿದೆ ನೋಡಿ; ಅರಣ್ಯ ಇಲಾಖೆಯ ಅಧಿಕಾರಿಗಳ ಯೋಚನೆ!

ಒತ್ತಾಯ ಹಾಗೂ ವಿನಂತಿ:

ಒಂದು ವರ್ಷದವರೆಗೆ "ಗಜೇಂದ್ರ" ಆನೆಯನ್ನು ನಿಭಾಯಿಸಿ ಅದರೊಂದಿಗೆ ಆತ್ಮೀಯತೆಯ ಬಂಧನವನ್ನು ಬೆಸೆದುಕೊಂಡಿರುವ ಮಾವುತ ಖುದ್ದೂಸ್ ಅವರಿಗೆ ನ್ಯಾಯ ಸಿಗುವಂತಾಗಬೇಕು. ಅವರು ಮತ್ತೆ "ಗಜೇಂದ್ರ" ಆನೆಯ ಜೊತೆಗೆ ಇರುವ ಅವಕಾಶ ನೀಡಬೇಕು. ರಾಜ್ಯದ ಅತ್ಯಂತ ಪರಿಣತ ಮಾವುತರಲ್ಲಿ ಒಬ್ಬರೆನ್ನುವ ಖ್ಯಾತಿ ಹೊಂದಿರುವ ಖುದ್ದೂಸ್ ಅವರನ್ನು "ಗಜೇಂದ್ರ" ಆನೆಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿನಂತಿ ಮಾಡುತ್ತೇನೆ.

ಆನೆಗಳ ಕಷ್ಟವನ್ನು ನೋಡಿ...!


ರಾಜ್ಯದ ಹನ್ನೊಂದು ಆನೆ ಶಿಬಿರಗಳಲ್ಲಿ ಒಂದಾಗಿರುವ ಕೆ.ಗುಡಿ(ಕ್ಯಾತೇಶ್ವರ ಗುಡಿ)ಯ ಆನೆ ಕ್ಯಾಂಪಿನಲ್ಲಿ ಇರುವ ಆನೆಗಳು ಪಡುತ್ತಿರುವ ಪರಿಪಾಡನ್ನು ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರು ಪ್ರತ್ಯಕ್ಷವಾಗಿ ಕಂಡು ಪರಾಮರ್ಶಿಸಿದ್ದಾರೆ. ಅದನ್ನು ದೃಶ್ಯರೂಪಗಳಲ್ಲಿ ಕೂಡ ಸೆರೆಹಿಡಿದು ತಮ್ಮ ಮುಂದೆ ಇಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆನೆಗಳ ವೇದನೆಯ ಮನಮಿಡಿಯುವ ದೃಶ್ಯಗಳನ್ನು ಹಾಗೂ ಆನೆ ಶಿಬಿರದಲ್ಲಿ ಇರುವ ಮಾವುತರು ಹಾಗೂ ಕಾವಾಡಿ ಕುಟುಂಬದವರ ಸಮಸ್ಯೆಗಳನ್ನು ಅರಿಯಲು ನೀವೂ ಬಯಸುವುದಾದರೆ ಈ ಸಾಕ್ಷ್ಯಚಿತ್ರವನ್ನು ಒಮ್ಮೆ ಖಂಡಿತವಾಗಿಯೂ ನೋಡಿ. ಆಸಕ್ತರಿಗೆ ಸಾಕ್ಷ್ಯಚಿತ್ರದ "ಸಿಡಿ" ಹಾಗೂ "ಡಿವಿಡಿ"ಯನ್ನು ಕಳುಹಿಸಿಕೊಡಲಾಗುವುದು. ಈ ಸಾಕ್ಷ್ಯಚಿತ್ರವನ್ನು ಕಿರುತೆರೆ ನಟಿಯೂ ಆಗಿರುವ "ಜಿಎನ್ಎಸ್" ಯಾಮಿನಿ ಫೌಂಡೇಷನ್ ಕಾರ್ಯದರ್ಶಿ ಶೋಭಾ ಎಂ.ಲೋಲನಾಥ್ ಅವರು ನಿರ್ಮಿಸಿದ್ದಾರೆ.

ಆನೆ ಶಿಬಿರಗಳ ಸಮಸ್ಯೆ ಬಿಂಬಿಸುವ ಸಾಕ್ಷ್ಯಚಿತ್ರದ
ಉಚಿತ ಸಿಡಿ ಹಾಗೂ ಡಿವಿಡಿ
ಪಡೆಯಲು ಸಂಪರ್ಕಿಸಿ:
ಕೆ.ಆರ್. ಸುದರ್ಶನ್ ಬಾಬು (ಮೊಬೈಲ್: 9986790221)
ಕೇಶಿ (ಮೊಬೈಲ್: 9449205331)

"ಮುಸ್ಸಂಜೆ"ಯಲ್ಲಿನ ಲೇಖನ ಓದಿದ ಸಚಿವರ ಮುಖದಲ್ಲಿ ಮಂದಹಾಸ


ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರು "ಮುಸ್ಸಂಜೆ" ಕನ್ನಡದ ಸಂಜೆ ಪತ್ರಿಕೆಗಾಗಿ ಬರೆದ "ತುರ್ತಾಗಿ ಚಿಕಿತ್ಸೆ ಸಿಗದೆ ಸತ್ತು ಹೋಯಿತು ಆನೆ" ಎನ್ನುವ ವಿಶೇಷ ಲೇಖನವನ್ನು ರಾಜ್ಯ ಕಾನೂನು ಸಚಿವರಾದ ಸುರೇಶ್ ಕುಮಾರ್ ಅವರು ಆಸಕ್ತಿಯಿಂದ ಓದಿದರು. ಚಾಮರಾಜನಗರ ಸಮೀಪದ "ಕ್ಯಾತೇಶ್ವರ ಗುಡಿ"ಯಲ್ಲಿರುವ ಜಂಗಲ್ ಲಾಡ್ಜಸ್ ನಲ್ಲಿ ಇತ್ತೀಚೆಗೆ ವಿಶ್ರಾಂತಿ ಪಡೆಯಲು ಆಗಮಿಸಿದ್ದ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರು "ಮುಸ್ಸಂಜೆ" ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನದ ಬಗ್ಗೆ ಹಾಗೂ ಆನೆಗಳ ಕುರಿತು ಇದೇ ಲೇಖನದಲ್ಲಿ ವ್ಯಕ್ತವಾದ ಕಾಳಜಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅಷ್ಟೇ ಅಲ್ಲ ಲೇಖನದಲ್ಲಿ ಮೂಡಿಬಂದ ಕೆಲವು ವ್ಯಂಗ್ಯೋಕ್ತಿಗಳನ್ನು ವಿಶೇಷವಾಗಿ ಎರಡೆರಡು ಬಾರಿ ಓದಿ ಮನದುಂಬಿ ನಕ್ಕರು. ವಿಶೇಷವಾಗಿ ಸರ್ಕಾರವು ಆನೆಗಳ ಸಂತತಿ ಉಳಿಸುವ ಕಡೆಗೆ ಗಮನ ನೀಡಬೇಕು ಎನ್ನುವ ಆಶಯಕ್ಕೆ ತಮ್ಮ ಬೆಂಬಲವೂ ಇದೆ ಎಂದು ಕೂಡ ಇದೇ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರು ಹೇಳಿದರು.

ಕುಣಿಗಲ್ ತಾಲೂಕಿಗೆ "ಕ್ವೀನ್ಸ್ ಬೆಟನ್"

https://mail.google.com/mail/?ui=2&ik=c2e62327b2&view=att&th=12add4a1d8da9cbf&attid=0.2&disp=inline&realattid=f_gdohp3b61&zw

ಕುಣಿಗಲ್ ತಾಲೂಕಿಗೆ ಕಾಮನ್ ವೆಲ್ತ್ ಕ್ರೀಡಾ ಕೂಟದ "ಕ್ವೀನ್ಸ್ ಬೆಟನ್" ಶನಿವಾರ ಆಗಮಿಸಿದಾಗ ಅದನ್ನು ಸ್ವಾಗತಿಸಿದ ಕುಣಿಗಲ್ ಶಾಸಕ ಬಿ.ಬಿ. ರಾಮಸ್ವಾಮಿ ಗೌಡ ಅವರು ಕ್ರೀಡಾಪಟುಗಳ ಜೊತೆಗೆ "ಕ್ವೀನ್ಸ್ ಬೆಟನ್" ಹಿಡಿದು ಓದಿದರು. ಓಟದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಶ್ರೀಧರ್ ಆಚಾರ್ ನಿಧನಕ್ಕೆ ಸಂತಾಪ

ರಾಜಕೀಯ ವಿಶ್ಲೇಷಣೆಗೆ ವಿಶೇಷವಾದ ಭಾಷೆಯೊಂದನ್ನು ನೀಡಿದ್ದ ಶ್ರೀಧರ್ ಆಚಾರ್ ನಿಧನವು ರಾಜ್ಯದ ಪತ್ರಿಕೋದ್ಯಮಕ್ಕೆ ದೊಡ್ಡ ನಷ್ಟ. "ಪ್ರಜಾವಾಣಿ" ಕನ್ನಡ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ರಾಜಕೀಯ ವರದಿ ಹಾಗೂ ವಿಶ್ಲೇಷಣೆಗಳಿಂದ ಕರ್ನಾಟಕದ ರಾಜಕಾರಣಿಗಳಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾ ಬಂದಿದ್ದ ಹಾಗೂ ತಪ್ಪು ಮಾಡಿದ ರಾಜಕಾರಣಿಗಳ "ಕಿವಿ"ಯನ್ನು ಮೊನಚಾದ ಪದಗಳಿಂದಲೇ "ಹಿಂಡುತ್ತಿದ್ದ" ವಿವೇಚನೆಯುಳ್ಳ ಪತ್ರಕರ್ತರನ್ನು ಕಳೆದುಕೊಂಡ ಕನ್ನಡ ನಾಡು ಈಗ ಬಡವಾಗಿದೆ.

ರಾಜಕೀಯ ವಲಯದಲ್ಲಿ "ಸಂಭಾವಿತ ಪತ್ರಕರ್ತ" ಎಂದೇ ಗುರುತಿಸಿಕೊಂಡಿದ್ದ ಶ್ರೀಧರ್ ಆಚಾರ್ ಅವರ ಅಗಲಿಕೆಯು ವೈಯಕ್ತಿಕವಾಗಿ ನನಗೂ ಅಪಾರ ವೇದನೆಯುಂಟುಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಆ ಭಗವಂತನಲ್ಲಿ ಪ್ರಾರ್ಧಿಸುತ್ತೇನೆ.

ಮೃತರ ಕುಟುಂಬದವರಿಗೆ ಪರಿವಾರದ ಹಿರಿಯನ ಅಗಲಿಕೆಯ ವೇದನೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ.

ಬಿ.ಬಿ.ರಾಮಸ್ವಾಮಿ ಗೌಡ,
ಶಾಸಕರು
ಕುಣಿಗಲ್ ವಿಧಾನಸಭಾ ಕ್ಷೇತ್ರ

ನಡೆಯುವೆ ನಾ...!


ಅಯ್ಯೋ ಪಾಪ;
ಜನರ ಪಾಲಿಗೆ ಕತ್ತಲೆ.
ಆರೋಗ್ಯ ಕಾಯಬೇಕಾದವನ
ಬೋಳು ತಲೆ ಬೆತ್ತಲೆ!
ಧ್ವನಿ ಎತ್ತಿ ನಾಡಿನುದ್ದಕ್ಕೂ
ನಾನೆಷ್ಟು ಸುತ್ತಲಿ?
ಹಾಗೆಂದು ನಾನೆಂದೂ
ನುಡಿಯಲಾರೆ, ದಣಿಯಲಾರೆ.
ಬಿಡುವುದಿಲ್ಲ ಹಟ;
ಎತ್ತಿ ಹಿಡಿಯುವೆ ಕೈ.
ಕತ್ತಲೆ ಬಿತ್ತಿದವರ
ನೆತ್ತಿಯ ಸುಡುವೆ.
ತಾಯಿಯ ಒಡಲಿನ
ಸಿರಿಯನೆಲ್ಲಾ ಅಗಿದು
ಬಗೆದವರ ಬಗ್ಗುಬಡಿಯುವೆ.
ಹಿಗ್ಗಿನಿಂದ ನಡೆಯುವೆ;
ಮತ್ತೆ ನೂರಾರು ಮೈಲಿ.
ಈ ಹೋರಾಟದಲ್ಲಿ ದಣಿವಿಲ್ಲ;
ಕರುನಾಡಿಗೆ ಹೊಸದೊಂದು
ಬೆಳಕು ಕಾಣುವವರೆಗೆ.

-ಬಿ.ಬಿ.ರಾಮಸ್ವಾಮಿ ಗೌಡ
ಶಾಸಕ, ಕುಣಿಗಲ್ ವಿಧಾನಸಭಾ ಕ್ಷೇತ್ರ

ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಎನ್ನುವ ಬೂಟಾಟಿಕೆ


ಬೆಲೆ ಏರಿಕೆ ವಿರುದ್ಧ ಬಿ.ಜೆ.ಪಿ. ಸೇರಿದಂತೆ ಇತರ ಪಕ್ಷಗಳು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯು ಬರೀ ಬೂಟಾಟಿಕೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಎನ್ನುವ ನೆಪದಲ್ಲಿ ಕೇವಲ ಕೃಷಿ ಉತ್ಪನ್ನಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಈ ಮಾತುಗಳು ರೈತ ವಿರೋಧಿ ಎನಿಸುತ್ತವೆ ಎನ್ನುವುದನ್ನು ಅವರು ಸ್ಪಷ್ಟವಾಗಿ ಅರಿಯುವುದು ಒಳಿತು.

ದಿನನಿತ್ಯದ ಜೀವನಕ್ಕೆ ಅಗತ್ಯವಿರುವ ವಿವಿಧ ಕಂಪೆನಿ ಉತ್ಪಾದಿತ ವಸ್ತುಗಳ ಕಡೆಗೆ ಇವರ ಗಮನ ಹರಿಯುತ್ತಲೇ ಇಲ್ಲ. ಕೇವಲ ಕೃಷಿ ಉತ್ಪನ್ನಗಳ ಕುರಿತು ಮಾತ್ರ ಧ್ವನಿ ಎತ್ತಿದ್ದಾರೆ. ಇದು ಪ್ರತಿಭಟನಾಕಾರರ ಯೋಚನೆಯು ಯಾವರೀತಿಯಲ್ಲಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ರೈತ ಬೆಳೆದ ಬೆಳೆಯ ಬೆಲೆ ಮಾತ್ರ ಕಡಿಮೆ ಆಗಬೇಕು, ಅದೇ ಕಂಪೆನಿಗಳು ಉತ್ಪಾದಿಸುವ ನಿತ್ಯೋಪಯೋಗಿ ವಸ್ತುಗಳ ಬೆಲೆ ಎಷ್ಟಾದರೂ ಇರಲಿ, ಆ ಬಗ್ಗೆ ಮಾತನಾಡುವುದೇ ಇಲ್ಲ.

ಕಂಪೆನಿ ಉತ್ಪನ್ನಗಳ ಬೆಲೆಯನ್ನು ಉತ್ಪಾದಕರು ಮನಬಂದಂತೆ ಹೆಚ್ಚಿಸುತ್ತಿದ್ದರೂ ಅದರ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಬಿ.ಜೆ.ಪಿ.ಯವರು. ಅವರಿಗೆ ಕೇವಲ ರೈತ ಬೆವರು ಸುರಿಸಿ ಬೆಳೆದ ತರಕಾರಿ ಹಾಗೂ ಧಾನ್ಯಗಳ ಮೇಲೆ ಮಾತ್ರ ಕಣ್ಣು. ಪ್ರತಿಭಟನೆ ನಡೆಸುವಾಗ ಅವರು ಪ್ರದರ್ಶಿಸುವುದು ಕೂಡ ತರಕಾರಿ ಹಾಗೂ ಆಹಾರ ಧಾನ್ಯಗಳನ್ನು ಮಾತ್ರ. ಬೆಲೆ ಏರಿಕೆಗೆ ಕಾರಣ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಹೆಚ್ಚಳ ಕಾರಣವೆಂದು ಹೇಳುತ್ತಾರೆ. ಅಂದರೆ ಅವರಿಗೆ ಕಾಳಜಿ ಇರುವುದು ಕೇವಲ ಆಹಾರ ಪದಾರ್ಥ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸುವ ಮಧ್ಯವರ್ತಿಗಳು ಹಾಗೂ ಸಾಗಣೆದಾರರ ಬಗ್ಗೆ ಮಾತ್ರ ಕಾಳಜಿ.

ರೈತ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದಿದ್ದರೂ, ಕೃಷಿ ಉತ್ಪನ್ನಗಳ ಬೆಲೆಯು ಮಧ್ಯವರ್ತಿಗಳ ಅಟ್ಟಹಾಸದ ಪರಿಣಾಮವಾಗಿ ಮುಗಿಲೆತ್ತರ ಮುಟ್ಟುತ್ತಿವೆ ಎನ್ನುವುದನ್ನು ಅವರು ಅರಿಯುತ್ತಿಲ್ಲ. ಬಿ.ಜೆ.ಪಿ. ಸೇರಿದಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಗದ್ದಲ ಮಾಡುತ್ತಲಿವೆ. ಆದರೆ ಈಗ ಪ್ರತಿಭಟನೆ ಮಾಡುತ್ತಿರುವವರು ಹಿಂದೆ ಎನ್.ಡಿ.ಎ. ಸರ್ಕಾರ ಇದ್ದಾಗ ಎಷ್ಟು ಬಾರಿ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಏರಿಸಲಾಯಿತು ಮತ್ತು ಗ್ಯಾಸ್ ಬೆಲೆ ಹೆಚ್ಚಾಗಿದ್ದು ಎಷ್ಟು ಎನ್ನುವುದನ್ನು ವಿಶ್ಲೇಷಣೆ ಮಾಡುವುದು ಒಳಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬಲೆಗೆ ತಕ್ಕಂತೆ ದೇಶದಲ್ಲಿಯೂ ಬೆಲೆಯಲ್ಲಿ ವ್ಯತ್ಯಾಸ ಆಗುತ್ತದೆ ಎನ್ನುವ ಸಾಮಾನ್ಯ ಜ್ಞಾನವು ಬಿ.ಜೆ.ಪಿ. ಸೇರಿದಂತೆ ಎಲ್ಲ ಪಕ್ಷಗಳಿಗೂ ಗೊತ್ತಿರದ ವಿಷಯವೇನಲ್ಲ.

ಈಗಂತೂ ತೈಲ ಪೂರೈಕೆ ಕಂಪೆನಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಆಗುವ ಬೆಲೆ ವ್ಯತ್ಯಾಸಕ್ಕೆ ತಕ್ಕಂತೆ ದೇಶದಲ್ಲಿ ಬೆಲೆಯನ್ನು ಹೆಚ್ಚಿಸುವ ಹಾಗೂ ಕಡಿಮೆ ಮಾಡುವ ಅವಕಾಶವನ್ನು ಪಡೆದುಕೊಂಡಿವೆ ಎನ್ನುವುದನ್ನು ವಿವರಿಸಿ ಹೇಳಬೇಕಾಗಿಲ್ಲ. ಆದರೆ ಕಂಪೆನಿಗಳು ಬೆಲೆ ಹೆಚ್ಚಿಸುತ್ತವೆ ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಕಡಿಮೆಯಾದಾಗ ಇಲ್ಲಿಯೂ ಬೆಲೆ ಇಳಿಸುವುದಿಲ್ಲ ಎನ್ನುವ ಟೀಕೆಯನ್ನು ಮಾತ್ರ ಒಪ್ಪಬಹುದು. ಆದರೆ ಅದಕ್ಕೆಲ್ಲಾ ಕೇಂದ್ರ ಸರ್ಕಾರವನ್ನು ಹೊಣೆಮಾಡುವ ಮುನ್ನ ಹಿಂದೆ ಬಿ.ಜೆ.ಪಿ. ನೇತೃತ್ವದ ಸರ್ಕಾರ ಇದ್ದಾಗ ಏನಾಗಿತ್ತು ಎನ್ನುವುದನ್ನೂ ಪುನರಾವಲೋಕನ ಮಾಡಿಕೊಳ್ಳುವುದು ಸರಿ.

ಆದರೆ ಬಿ.ಜೆ.ಪಿ. ಹಾಗೂ ಇತರ ಪಕ್ಷಗಳು ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರವನ್ನು ಕಾರಣವಿಲ್ಲದೇ ದೂರುತ್ತಿರುವುದು ವಿಪರ್ಯಾಸ. ರೈತರು ಬೆಳೆದ ಬೆಳೆಗೆ ತಕ್ಕ ಬೆಲೆಯೂ ಸಿಗಬೇಕು, ಗ್ರಾಹಕರಿಗೆ ತೃಪ್ತಿಕರವಾದ ಬೆಲೆಗೆ ಕೃಷಿ ಉತ್ಪನ್ನಗಳು ಲಭ್ಯವಾಗಬೇಕು ಎನ್ನುವ ವಿಚಾರದಲ್ಲಿ ಬಿ.ಜೆ.ಪಿ. ಹಾಗೂ ಇನ್ನಿತರ ಪಕ್ಷಗಳು ಮಾತನಾಡಲಿ. ಆಗ ಅದು ವಿವೇಚನೆಯುಳ್ಳ ಮಾತು ಎನಿಸುತ್ತದೆ. ಆದರೆ ತರ್ಕವಿಲ್ಲದೇ ಕೇವಲ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುವುದು ಕೇವಲ ಬೂಟಾಟಿಕೆ ಎನಿಸುತ್ತದೆ.

ಇನ್ನೂ ಮಹತ್ವದ ಅಂಶವೂ ಇದೆ. ಬಿ.ಜೆ.ಪಿ. ಇನ್ನಿತರ ಪಕ್ಷಗಳು ಬೆಲೆ ಏರಿಕೆ ಪ್ರಶ್ನೆ ಎತ್ತುವಾಗ ಕೇವಲ ಖಾದ್ಯ ಪದಾರ್ಥಗಳ ಕುರಿತು ಮಾತ್ರ ಮಾತನಾಡುವ ಬದಲು, ಕಂಪೆನಿ ಉತ್ಪಾದನೆಗಳಾಗಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆಯೂ ಮಾತನಾಡಲಿ. ಆದರೆ ಆ ಗಟ್ಟಿತನವನ್ನು ಬಿ.ಜೆ.ಪಿ. ಈವರೆಗೆ ಮಾಡಿಲ್ಲ. ಕಡ್ಡಿ ಪೆಟ್ಟಿಗೆಯಿಂದ ಹಿಡಿದು ಇನ್ನಿತರ ದಿನನಿತ್ಯ ಬಳಕೆಯ ಅನೇಕ ಕಂಪೆನಿ ಉತ್ಪನ್ನಗಳ ಕುರಿತೂ ಧ್ವನಿ ಎತ್ತಲಿ. ಆದರೆ ಬಿ.ಜೆ.ಪಿ. ಹಾಗೂ ಇತರ ಪಕ್ಷಗಳು ಹಾಗೆ ಮಾಡುವುದಿಲ್ಲ. ಅದಕ್ಕೆ ಕಾರಣ ಅವರದ್ದು ಕೇವಲ ರೈತರ ಹಿತಕ್ಕೆ ಧಕ್ಕೆ ತರುವಂಥ ಮನೋಭಾವದ ಯೋಚನೆ.

ನಿಜವಾಗಿ ಅಗತ್ಯ ವಸ್ತುಗಳ ಬೆಲೆ ಕಡಿಮೆ ಆಗಬೇಕು ಎನ್ನುವ ಕಾಳಜಿ ಇದ್ದರೆ ರೈತರು ಬೆಳೆಯುವ ಬೆಳೆಯ ಬಗ್ಗೆ ಮಾತನಾಡುವ ಬದಲು, ಎಲ್ಲ ಅಗತ್ಯ ವಸ್ತುಗಳ ಕುರಿತು ಮಾತನಾಡಲಿ. ಜೊತೆಗೆ ರೈತರ ಹಿತಕ್ಕೆ ಧಕ್ಕೆ ಆಗದ ರೀತಿಯಲ್ಲಿ ಬೆಲೆಗಳಿಗೆ ಕಡಿವಾಣ ಹಾಕುವ ಕುರಿತು ಸೂಕ್ತ ವೇದಿಕೆಯಲ್ಲಿ ಚರ್ಚೆ ಮಾಡಲಿ. ಬರಿ ಬೀದಿಗೆ ಇಳಿದು ಪ್ರತಿಭಟನೆ ಮಾಡುವುದು ಬಿಟ್ಟು; ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಬೆಲೆ ನಿಯಂತ್ರಣ ಮಾಡುವುದಕ್ಕೆ ವಿರೋಧ ಪಕ್ಷಗಳು ಸಹಕಾರ ನೀಡಲಿ.

ರೈತರಿಗೆ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುವಂಥ; ಸಾಮಾನ್ಯ ಜನರಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ಅಗತ್ಯ ವಸ್ತುಗಳು ಸಿಗುವಂತೆ ಮಾಡುವ ಮಾರ್ಗವೊಂದು ಖಂಡಿತ ಇದೆ. ಆದರೆ ಆ ಬಗ್ಗೆ ಯೋಚನೆ ಮಾಡುವುದು ಕೇವಲ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ರಾಜ್ಯ ಸರ್ಕಾರಗಳೂ ತಮ್ಮ ಕೊಡುಗೆ ನೀಡುವುದು ಅಗತ್ಯವೂ ಅಗಿದೆ. ಕೇಂದ್ರ ಸರ್ಕಾರವನ್ನು ಬೆಲೆ ಏರಿಕೆಗಾಗಿ ದೂರುತ್ತಿರುವ ಬಿ.ಜೆ.ಪಿ. ಸೇರಿದಂತೆ ಇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳೂ ಇಂಥದೊಂದು ಸಹಕಾರ ನೀಡುತ್ತವೆಯೇ? ಹಾಗೆ ಸಹಕಾರ ನೀಡುವುದಾದರೆ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುವುದು ಖಂಡಿತ ಸಾಧ್ಯ!

ನಾಡಿನ ಹಿತ ಬಯಸುವ

ಬಿ.ಬಿ. ರಾಮಸ್ವಾಮಿ ಗೌಡ
ಶಾಸಕರು, ಕುಣಿಗಲ್

ಅಕ್ರಮ ಗಣಿಗಾರಿಕೆ ಏನೆಂದು ಜನರಿಗೆ ತಿಳಿಸುವುದು ಅಗತ್ಯ


"ಅಕ್ರಮ ಗಣಿಗಾರಿಕೆ" ಎನ್ನುವ ಮಾತು ಬೆಳಗಾದರೆ ಸುದ್ದಿ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಕೇಳುತ್ತಲೇ ಇದೆ. ಆದರೆ ಯಾವೊಂದು ಮಾಧ್ಯಮದಲ್ಲಿ ಅಕ್ರಮ ಗಣಿಗಾರಿಕೆ ಎಂದರೇನು ಎನ್ನುವುದನ್ನು ವಿವರಿಸಿ ಹೇಳುವ ಪ್ರಯತ್ನ ಮಾತ್ರ ನಡೆದಿಲ್ಲ. ಆದ್ದರಿಂದ ಜನಸಾಮಾನ್ಯರಿಗೆ ಈ ವಿಷಯದ ಕರಾಳ ಸ್ವರೂಪ ಏನೆನ್ನುವುದು ಸ್ಪಷ್ಟವಾಗಿ ಅರಿವಾಗುತ್ತಿಲ್ಲ. ಮಾಧ್ಯಮಗಳು ಈ ವಿಷಯವನ್ನು ಜನರಿಗೆ ತಿಳಿಹೇಳುವ ಕೆಲಸವನ್ನು ಮಾಡುವುದು ಅಗತ್ಯವೂ ಆಗಿದೆ. ಆ ನಿಟ್ಟಿನಲ್ಲಿ ನನ್ನ ಈ ಕೆಲವು ಮಾತುಗಳು ಅಕ್ರಮ ಗಣಿಗಾರಿಕೆ ಎಂದರೇನು ಎನ್ನುವುದನ್ನು ಮನದಟ್ಟು ಮಾಡುವಲ್ಲಿ ಸಹಕಾರಿ ಆಗುತ್ತವೆ ಎಂದುಕೊಂಡಿದ್ದೇನೆ. ತಾವು ತಮ್ಮ ಮಾಧ್ಯಮದ ಮೂಲಕ ಇದನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಬೇಕೆಂದು ತಮ್ಮಲ್ಲಿ ವಿನಂತಿ ಮಾಡುತ್ತೇನೆ.

ನೈಸರ್ಗಿಕ ಸಂಪತ್ತಿನ ಲೂಟಿ:

ಅಕ್ರಮ ಗಣಿಗಾರಿಕೆಯು ನೈಸರ್ಗಿಕ ಸಂಪತ್ತಿನ್ನು ಯಥೇಚ್ಛವಾಗಿ ಲೂಟಿ ಮಾಡುವ ಕರಾಳ ಕೃತ್ಯ. ಇದನ್ನು ಅಧಿಕಾರದ ಚುಕ್ಕಾಣಿ ಹಿಡಿದವರಲ್ಲಿಯೇ ಕೆಲವರು ಮಾಡುತ್ತಿದ್ದಾರೆ ಎನ್ನುವುದು ಇನ್ನೂ ದೊಡ್ಡ ದುರಂತ. ಇದು ಬ್ರಿಟಿಷರು ದೇಶದ ಸಂಪತ್ತನ್ನು ಲೂಟಿ ಹೊಡೆದದ್ದಕ್ಕಿಂತ ದೊಡ್ಡ ಹೇಯ ಕೃತ್ಯ. ಆಗ ಹೊರಗಿನವರು ಬಂದು ಮಾಡಿದ್ದನ್ನು ಈಗ ದೇಶದೊಳಗೆ ಇರುವವರೇ ಮಾಡುತ್ತಿದ್ದಾರೆ.

ಬ್ರಿಟಿಷರ ವಿರುದ್ಧ ದೇಶದ ಕೋಟಿ ಕೋಟಿ ಜನರು ಹೋರಾಟ ಮಾಡಿದ್ದು ಏಕೆ? ಅವರು ದಬ್ಬಾಳಿಕೆ ನಡೆಸಿ, ನಮ್ಮ ಸಂಪತ್ತನ್ನು ಹೊರಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಕಾರಣಕ್ಕೆ. ಕೇವಲ ರಾಜಕೀಯ ಸ್ವಾಂತಂತ್ರ್ಯ ಬೇಕು ಎನ್ನುವ ಕಾರಣಕ್ಕಾಗಿ ಅಂದು ಜನರು ಒಂದುಗೂಡಲಿಲ್ಲ. ನಿಜವಾಗಿ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಒಂದಾಗಿದ್ದು ದೇಶದ ಸಂಪತ್ತನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಬೇಕು ಹಾಗೂ ದೇಶದ ಸಂಪತ್ತನ್ನು ಕಾಯ್ದುಕೊಳ್ಳಬೇಕೆಂದು.

ದೇಶದ ನೈಸರ್ಗಿಕ ಸಂಪತ್ತನ್ನು ಬ್ರಿಟಿಷರು ಆಗ ಮಂದಗತಿಯ ರೈಲು, ವಾಹನ, ಎತ್ತಿನ ಗಾಡಿ... ಹೀಗೆ ನಿಧಾನ ಸಾರಿಗೆಯ ಮೂಲಕ ಸಾಗಿಸುತ್ತಿದ್ದರು. ಆದ್ದರಿಂದ ಬ್ರಿಟಿಷರು ಭಾರಿ ಪ್ರಮಾಣದಲ್ಲಿ ನಮ್ಮ ಸಂಪತ್ತನ್ನು ಹೊತ್ತು ಹೊರಗೆ ಸಾಗಿಸಲು ಸಾಧ್ಯವಾಗಲಿಲ್ಲ. ಆದರೆ ಇಂದು ಏನಾಗುತ್ತಿದ್ದೆ? ನಮ್ಮವರೇ ದಿನವೊಂದಕ್ಕೆ ಸಾವಿರಾರು ಲಾರಿಗಳಷ್ಟು ಅದಿರನ್ನು ಎತ್ತಿ ಸಾಗಿಸುತ್ತಿದ್ದಾರೆ. ವಿಚಿತ್ರವೆಂದರೆ ಅದರಲ್ಲಿ ಮುಕ್ಕಾಲು ಭಾಗಕ್ಕೂ ಹೆಚ್ಚು ಲಾರಿಗಳು ಅಕ್ರಮವಾಗಿ ವಿವಿಧ ಬಂದರುಗಳ ಕಡೆಗೆ ಸಾಗುತ್ತವೆ. ಅವುಗಳಿಗೆ ಕಡಿವಾಣ ಹಾಕುವ ಪ್ರಯತ್ನವು ಕಳೆದ ಎರಡು ವರ್ಷಗಳಲ್ಲಿಯಂತೂ ನಡೆದೇ ಇಲ್ಲ.

ವಿದೇಶಿ ಲೂಟಿಕೋರರನ್ನು ಓಡಿಸಿದೆವು; ನಮ್ಮವರಿಗೆ ಏನು ಮಾಡುವುದು?:

ಬ್ರಿಟಿಷರು ದಬ್ಬಾಳಿಕೆ ಮಾಡಿ ನಮ್ಮ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾಗ ದೇಶವೇ ಒಂದಾಗಿ ಹೋರಾಡಿ, ಅವರನ್ನು ದೇಶ ಬಿಟ್ಟು ಓಡಿಸಿದ್ದಾಯಿತು. ಆದರೆ ಈಗ ನಮ್ಮ ಜನರೇ ತಮ್ಮ ಭಾಹು ಮತ್ತು ಧನ ಬಲದಿಂದ ನೆಲದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ. ಇವರು ಬಲವಾಗಿ ಬೆಳೆದಿದ್ದಾರೆ. ಸರ್ಕಾರದ ಮೇಲೆ ಹಿಡಿತ ಸಾಧಿಸಿ, ಆಟವಾಡಿಸುವ ಮಟ್ಟದಲ್ಲಿ ಗಟ್ಟಿಯಾಗಿದ್ದಾರೆ. ಇವರ ವಿರುದ್ಧ ಏನು ಮಾಡುವುದು? ಇದು ಈಗಿನ ಸವಾಲು.

ಇಂಥ ಲೂಟಿಕೋರರ ವಿರುದ್ಧವೂ ಜನಾಂದೋಲನ ನಡೆಯಬೇಕು. ಅದು ಸಾಧ್ಯವಾಗುವುದು ಜನರಿಂದ. ಆದ್ದರಿಂದ ಜನರಿಗೆ ಮೊದಲು ಈ ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಜನರಿಗೆ ಈ ಅಕ್ರಮ ಗಣಿಗಾರಿಕೆಯಿಂದ ಅವರ ಮೇಲೆ ಆಗುವ ಪರಿಣಾಮದ ಬಗ್ಗೆಯೂ ಮಾಹಿತಿ ನೀಡುವ ಕೆಲಸ ಮಾಡಬೇಕು. ಇದು ಸಾಧ್ಯವಾಗಬೇಕಾಗಿರುವುದು ಮಾಧ್ಯಮಗಳಿಂದ. ಆದರೆ ಮಾಧ್ಯಮಗಳು ಅಕ್ರಮ ಗಣಿಗಾರಿಕೆ ಎಂದು ಮತ್ತೆ ಮತ್ತೆ ಹೇಳುತ್ತಿದ್ದರೂ, ಹಾಗೆಂದರೇನು; ಅದರಿಂದ ಅವರ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ನಿಖರವಾದ ಮಾಹಿತಿ ನೀಡಲೇಬೇಕು. ಆಗಲೇ ಜನಜಾಗೃತಿ ಸಾಧ್ಯವಾಗಿ ಹೋರಾಟದ ಬಲ ಹೆಚ್ಚುತ್ತದೆ.

ಗಣಿಗಾರಿಕೆ ನಡೆಯುವ ಭಾಗದ ಜನರಿಗೇ ಪ್ರಯೋಜನವೇನಿಲ್ಲ:

ಗಣಿಗಾರಿಕೆ ನಡೆಯುವ ಕರ್ನಾಟಕದ ಭಾಗಗಳ ಕಡೆಗೆ ಒಂದು ಬಾರಿ ನೋಡಿದರೆ ಅದರಿಂದ ಆಗಿರುವ ದುಷ್ಪರಿಣಾಮದ ಸ್ಪಷ್ಟ ಅರಿವಾಗುತ್ತದೆ. ವಿಚಿತ್ರವೆಂದರೆ ಆ ಭಾಗದ ಸಾಮಾನ್ಯ ಜನರಿಗೆ ಅದರಿಂದ ಯಾವುದೇ ಪ್ರಯೋಜನವೂ ಆಗುತ್ತಿಲ್ಲ. ಕೆಲವರು ಮಾತ್ರ ಆರ್ಧಿಕವಾಗಿ ಪ್ರಬಲರಾಗುತ್ತಿದ್ದಾರೆ. ಸಾಮಾನ್ಯ ಜನರಿಗೆ ಈ ಗಣಿಗಾರಿಕೆಯಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸಿಕ್ಕಿಲ್ಲ. ಇನ್ನು ಆ ಭಾಗದ ಜನರು ರಸ್ತೆಗೆ ಇಳಿಯುವುದೇ ಕಷ್ಟವೆನ್ನುವಂತೆ ಆಗಿದೆ. ನಿರಂತರವಾಗಿ ಲಾರಿಗಳ ಓಡಾಟದ ಪರಿಣಾಮವಾಗಿ ಬಾಕಿ ಜನರಿಗೆ ಸಂಚಾರವು ದುಸ್ಥರವಾಗಿದೆ.

ನಮ್ಮ ನಾಡಿನ ಸಂಪತ್ತನ್ನು ನಮ್ಮಲ್ಲಿಯೇ ಪರಿಷ್ಕರಿಸಿ, ಇಲ್ಲಿಯೇ ಅದು ಕೊನೆಯದಾಗಿ ಲೋಹದ ರೂಪ ಪಡೆಯುವಂಥ ಸಾಧ್ಯತೆಗಳೇ ಇಲ್ಲವಾಗಿವೆ. ಆದ್ದರಿಂದ ನೇರವಾಗಿ ನಮ್ಮ ಪ್ರಾಕೃತಿಕ ಸಂಪತ್ತು ವಿದೇಶಕ್ಕೆ ಹೋಗುತ್ತಿದೆ. ಇದರಿಂದಾಗಿ ಗಣಿಗಾರಿಕೆಯು ನಾಡಿಗೆ ಯಾವುದೇ ರೀತಿಯಲ್ಲಿ ಪ್ರಯೋಜನಕಾರಿ ಆಗುತ್ತಿಲ್ಲ. ಅದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಅಕ್ರಮವಾಗಿ ನಮ್ಮಲ್ಲಿನ ಲೋಹ ಸಂಪತ್ಭರಿತವಾದ ಮಣ್ಣನ್ನು ಅಕ್ರಮವಾಗಿ ವಿದೇಶಕ್ಕೆ ಹೋಗುತ್ತಿರುವುದು.

ಅಕ್ರಮವಾಗಿ ಸಾವಿರಾರು ಲಾರಿ ಖನಿಜ ಸಂಪತ್ತು ಹೋರಗೆ ಹೋಗುತ್ತಿದ್ದರೂ, ಅದರಿಂದ ರಾಜ್ಯಕ್ಕೆ ಆದಾಯವೇನು ಬರುತ್ತಿಲ್ಲ. ಬರುತ್ತಿರುವುದು ಎಳ್ಳುಕಾಳಿನಷ್ಟು. ಬಾಕಿ ಎಲ್ಲ ಲಾಭವನ್ನೂ ಅಕ್ರಮ ಗಣಿಗಾರಿಕೆಯಿಂದ ಕೊಬ್ಬಿರುವ ಗಣಿಧಣಿಗಳೇ ನುಂಗಿ ಹಾಕುತ್ತಿದ್ದಾರೆ. ಅವರು ರಾಜ್ಯದ ಪ್ರಾಕೃತಿಕ ಸಂಪತ್ತನ್ನು ತಮ್ಮದೇ ಸ್ವತ್ತು ಎನ್ನುವ ರೀತಿಯಲ್ಲಿ ನಿರಾತಂಕವಾಗಿ ಹೊರ ದೇಶಗಳಿಗೆ ಸಾಗಿಸುತ್ತಿದ್ದಾರೆ. ಅವರೇ ಸರ್ಕಾರದಲ್ಲಿಯೂ ಇರುವುದರಿಂದ, ರಾಜ್ಯವೇ ತಮ್ಮದು ಎನ್ನುವಂತೆ ದರ್ಪ ತೋರುತ್ತಿದ್ದಾರೆ.

ಯಾವುದು ಅಕ್ರಮ?:

ಅಕ್ರಮ ಗಣಿಗಾರಿಕೆ ಎನ್ನುವ ಎರಡು ಪದಗಳು ಮತ್ತೆ ಮತ್ತೆ ಕೇಳುತ್ತಿದ್ದರೂ ಹಾಗೆಂದರೇನು ಎನ್ನುವುದನ್ನು ಸಾಮಾನ್ಯ ಜನರಿಗೆ ವಿವರಿಸಿ ಹೇಳುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ನಾನು ಇಲ್ಲಿ ಆ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಲು ಬಯಸುತ್ತೇನೆ. ಗಣಿಗಾರಿಕೆ ನಾಡಿಗೆ ಆದಾಯ ತರುವಂಥದಾಗಿದ್ದರೆ; ಅದು ಅಕ್ರಮ ಆಗುವುದಿಲ್ಲ. ಅದೇ ಭೊಕ್ಕಸಕ್ಕೆ ಬಿಡಿಗಾಸನ್ನೂ ತರದೇ ಗಣಿಗಾರಿಕೆ ನಡೆದರೆ ಅದೇ ಅಕ್ರಮ. ಅಕ್ರಮ ಗಣಿಗಾರಿಕೆ ಹಲವಾರು ರೀತಿಯಲ್ಲಿ ನಡೆಯುತ್ತದೆ. ಅವುಗಳಲ್ಲಿ ಕೆಲವು ಅಪಾಯಕಾರಿ ಸ್ವರೂಪದವು. ಅವುಗಳನ್ನು ನಾನಿಲ್ಲಿ ಸಂಪೂರ್ಣ ವಿವರದೊಂದಿಗೆ ಪಟ್ಟಿ ಮಾಡುತ್ತಿದ್ದೇನೆ.

1. ಗಣಿಗಾರಿಕೆ ಉದ್ದೇಶದಿಂದ ಲೀಸ್ ಪಡೆದ ಜಮೀನು ಇದ್ದರೂ ಅದರಲ್ಲಿ ವರ್ಷಕ್ಕೆ ನಿಗದಿ ಮಾಡಿದ ಪ್ರಮಾಣದಲ್ಲಿ ಅದಿರುಯುಕ್ತವಾದ ಮಣ್ಣನ್ನು ತೆಗೆಯಬೇಕು. ಆದರೆ ಲೀಸ್ ಪಡೆದಿದ್ದೇವೆ ಎಂದುಕೊಂಡು ಮನಸೋ ಇಚ್ಛೆಯಾಗಿ ಮಣ್ಣನ್ನು ಎತ್ತಲಾಗುತ್ತಿದೆ. ಆಧುನಿಕ ಯಂತ್ರಗಳಿಂದ ದಿನಕ್ಕೆ ಸಾವಿರಾರು ಲಾರಿ ಅದಿರುಯುಕ್ತವಾದ ಮಣ್ಣನ್ನು ಸಾಗಿಸಲಾಗುತ್ತಿದೆ. ಒಂದು ಲಾರಿ ಮಣ್ಣು ಸಾಗಿಸುವಾಗ ಅದಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ನಿಗದಿ ಮಾಡಿದ ಶುಲ್ಕವನ್ನು ಪಾವತಿ ಮಾಡಬೇಕು. ಆದರೆ ನೂರು ಲಾರಿಗಳಿಗೆ ಶುಲ್ಕವನ್ನು ಪಾವತಿ ಮಾಡಿ ಸಾವಿರ ಲಾರಿಯಷ್ಟು ಅದಿರುಯುಕ್ತ ಮಣ್ಣು ಸಾಗಿಸಲಾಗುತ್ತಿದೆ. ಇದರಿಂದಾಗಿ ರಾಜ್ಯದ ಭೊಕ್ಕಸಕ್ಕೆ ಭಾರಿ ಪ್ರಮಾಣದ ನಷ್ಟವಾಗುತ್ತದೆ. ಅಷ್ಟೇ ಅಲ್ಲ ನಾಡಿನ ಸಂಪತ್ತು ಕೆಲವೇ ವ್ಯಕ್ತಿಗಳ ಲಾಭಕ್ಕಾಗಿ ಹೊರಗೆ ಹರಿದು ಹೋಗುತ್ತದೆ. ಇದು ಅಕ್ರಮ ಗಣಿಗಾರಿಕೆ.

2. ಲೀಸ್ ಪಡೆದ ಬಲಾಢ್ಯರು ಪಕ್ಕದಲ್ಲಿನ ಬೇರೆಯವರ ಒಡೆತನದ ಜಮೀನನ್ನು ಆಕ್ರಮಣ ಮಾಡಿಕೊಂಡು ಅಲ್ಲಿಂದಲೂ ಅದಿರುಯುಕ್ತ ಮಣ್ಣನ್ನು ಎತ್ತಿ ಲೋಡ್ ಮಾಡಿ ಸಾಗಿಸುವುದು ಇನ್ನೊಂದು ರೀತಿಯ ಅಕ್ರಮ ಗಣಿಗಾರಿಕೆ. ಇಂಥ ಸಂದರ್ಭದಲ್ಲಿ ಧನ ಹಾಗೂ ಬಾಹುಬಲಿಗಳ ಬಲವನ್ನು ಹೊಂದಿದವರು ಪಕ್ಕದ ಜಮೀನಿನ ದುರ್ಬಲರಾದ ಒಡೆಯರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಇದರಿಂದ ನಿಜವಾಗಿ ಜಮೀನಿನ ಹಕ್ಕು ಹೊಂದಿದವನು ಯಾವುದೇ ಲಾಭವಿಲ್ಲದೇ ಬೇರೆಯವನು ಆರ್ಧಿಕವಾಗಿ ಕೊಬ್ಬಲು ಸಾಧ್ಯವಾಗುತ್ತದೆ. ವಿಚಿತ್ರವೆಂದರೆ ಜಮೀನು ಒಡೆತನ ಹೊಂದಿದವನು ಗಣಿಗಾರಿಕೆ ಮಾಡಿಲ್ಲದಿದ್ದರೂ, ಅದು ಅವನೇ ಮಾಡಿದ ಅಕ್ರಮ ಗಣಿಗಾರಿಕೆ ಎನ್ನುವಂತೆ ಬಿಂಬಿತವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಅಮಾಯಕರು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ.

3. ಗಣಿಗಾರಿಕೆ ಉದ್ದೇಶದಿಂದ ಅನುಮತಿ ಪಡೆದು ನಿಗದಿತ ಜಮೀನಿನಿಂದ ಅದಿರುಯುಕ್ತ ಮಣ್ಣನ್ನು ತೆಗೆಯುವ ಬದಲು, ಅದೇ ಅನುಮತಿ ಪತ್ರವನ್ನು ಇಟ್ಟುಕೊಂಡು ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿ ಅಲ್ಲಿಂದಲೂ ಅದಿರುಯುಕ್ತ ಮಣ್ಣನ್ನು ಎತ್ತುವುದು ಅಕ್ರಮ ಗಣಿಗಾರಿಕೆಯ ಇನ್ನೊಂದು ಮುಖ. ಅಷ್ಟೇ ಅಲ್ಲ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಲಾರಿಗಳ ಓಡಾಟಕ್ಕೆ ಮಾರ್ಗಗಳನ್ನು ಕೂಡ ರೂಪಿಸುವುದು ಇನ್ನೊಂದು ಅಪಾಯ. ಇದರಿಂದ ಭೂಮಿಯೊಳಗಿನ ಸಂಪತ್ತಿನ ಜೊತೆಗೆ ಅರಣ್ಯ ಸಂಪತ್ತಿಗೂ ಕುತ್ತು. ಅತಿಕೃಮವಾಗಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಮಾಡುವುದು ಬಲಾಢ್ಯ ಶಕ್ತಿಗಳಾಗಿ ಬೆಳೆದಂಥ ಗಣಿಧಣಿಗಳಿಂದ ಮಾತ್ರ ಸಾಧ್ಯ. ಏಕೆಂದರೆ ಅವರು ಧನಬಲದಿಂದ ಆ ಪ್ರದೇಶದಲ್ಲಿ ತಮ್ಮದೇ ಆದ ಪರ್ಯಾಯವಾದ ಸರ್ಕಾರವೊಂದನ್ನು ಮಾಡಿಕೊಂಡು ಬಿಟ್ಟಿರುತ್ತಾರೆ. ಅವರನ್ನು ಪ್ರಶ್ನಿಸುವ ಗಟ್ಟಿತನ ಯಾವುದೇ ಸರ್ಕಾರಿ ಅಧಿಕಾರಿಗಳಲ್ಲಿಯೂ ಇಲ್ಲವಾಗಿದೆ.

4. ಲೀಸ್ ಪಡೆದ ಪ್ರದೇಶದಿಂದ ನಿಗದಿ ಮಾಡಿದ ಪ್ರಮಾಣದಲ್ಲಿಯೇ ಅದಿರು ತೆಗೆದಿದ್ದಾಗಿ ಕೇವಲ ಕಾಗದದ ಮೇಲೆ ಮಾತ್ರ ದಾಖಲೆ ತೋರಿಸುವ ಗಣಿಧಣಿಗಳು ನಡೆಸಿರುವ ಲೂಟಿ ಯಾವ ಪ್ರಮಾಣದ್ದು ಎನ್ನುವುದು ಅಲ್ಲಿ ಕೊರೆದ ಕಂದಕಗಳನ್ನು ನೋಡಿದಾಗಲೇ ಸ್ಪಷ್ಟವಾಗುತ್ತದೆ. ಅಕ್ರಮ ಗಣಿಗಾರಿಕೆ ಸುಗಮವಾಗುವುದಕ್ಕೆ ಬೃಹತ್ ಯಂತ್ರಗಳು ಕೂಡ ಸಹಕಾರಿಯಾಗಿವೆ. ಅಷ್ಟೇ ಅಲ್ಲ ಹಗಲು ರಾತ್ರಿ ಎನ್ನದೇ ಅದಿರನ್ನು ಹೆಕ್ಕಿ ತೆಗೆಯಲಾಗುತ್ತದೆ. ಹೀಗೆ ಗಣಿಗಳ ಆಳವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ ಗಣಿಧಣಿಗಳಿಂದ ಸರ್ಕಾರಕ್ಕೆ ಸಲ್ಲುವ ಶುಲ್ಕ ಮಾತ್ರ ತೀರ ಅತ್ಯಲ್ಪ. ಏಕೆಂದರೆ ದಾಖಲೆಯಲ್ಲಿ ಅವರು ತೋರಿಸುವ ಅದಿರು ಸಾಗಣೆಯ ಮಾಹಿತಿ ತೀರ ಕಡಿಮೆ ಆಗಿರುತ್ತದೆ.

5. ಗೋವಾ, ಮಂಗಳೂರು, ಕಾರವಾರ, ವಿಶಾಖಪಟ್ಟಣ, ಮುಂಬೈ ಬಂದರುಗಳ ಕಡೆಗೆ ಸಾಗುವ ಲಾರಿಗಳ ಸಂಖ್ಯೆಯನ್ನು ಗಮನಿಸಿದರೆ ರಾಜ್ಯಕ್ಕೆ ಗಣಿಗಾರಿಕೆಯಿಂದಲೇ ಭಾರಿ ಪ್ರಮಾಣದ ಆದಾಯ ಬರಬೇಕು. ಆದರೆ ಹಾಗೆ ಆಗುವುದೇ ಇಲ್ಲ. ಗಣಿಗಾರಿಕೆಯು ರಾಜ್ಯದ ಭೊಕ್ಕಸಕ್ಕೆ ಲಾಭಕಾರಿ ಆಗಿಯೇ ಇಲ್ಲ. ಇದಕ್ಕೆ ಕಾರಣ ಅಕ್ರಮವಾಗಿಯೇ ಈ ಲಾರಿಗಳ ಓಡಾಟ ಸಾಗಿದೆ. ಚೆಕ್ ಪೋಸ್ಟ್ ಗಳಲ್ಲಿಯೂ ಕೂಡ ಲಾರಿಗಳು ಸಾಗಿ ಹೋದ ದಾಖಲೆಯೇ ಇಲ್ಲದ ರೀತಿಯಲ್ಲಿ ವ್ಯವಸ್ಥೆಯನ್ನು ಗಣಿಧಣಿಗಳು ಮಾಡಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿಯೂ ಅಕ್ರಮ ನಡೆಯುತ್ತಿದೆ. ಅಲ್ಲಿ ಒಂದಿಷ್ಟು ಮೂಗುದಾರ ಬಿಗಿಗೊಳಿಸಿದರೆ ಅಕ್ರಮವಾಗಿ ಅದಿರು ಸಾಗಿಸುವುದು ಸಾಧ್ಯವಾಗುವುದಿಲ್ಲ. ಆದರೆ ಹೆಚ್ಚಿನವರು ಗಣಿಧಣಿಗಳ ಧನಬಲದ ಮುಷ್ಟಿಯಲ್ಲಿ ಸಿಲುಕಿರುವುದರಿಂದ ಚಕಾರವನ್ನೂ ಎತ್ತುವುದಿಲ್ಲ.

ಪ್ರಮಾಣಕ್ಕಿಂತ ಹೆಚ್ಚು ಖನಿಜ ಸಾಗಣೆ:

ಒಂದು ಗಣಿಯಿಂದ ಮಣ್ಣು ತೆಗೆದಾಗ ಅದನ್ನು ಒಂದು ಪರಿಮಿತಿ ಇರುವ ಅದಿರು ಪ್ರಮಾಣದೊಂದಿಗೆ ಮಾತ್ರ ರಫ್ತು ಮಾಡಬೇಕು. ಉದಾಹರಣೆಗೆ 63.5 ಪ್ರಮಾಣದಲ್ಲಿ ಕಬ್ಬಿಣ ಯುಕ್ತ ಮಣ್ಣು ಸಾಗಿಸಬೇಕು ಎಂದು ನಿಗದಿ ಆಗಿದ್ದರೆ, ಅಷ್ಟೇ ಪ್ರಮಾಣದಲ್ಲಿ ಕಬ್ಬಿಣ ಯುಕ್ತ ಮಣ್ಣು ಸಾಗಣೆಯಾಗಬೇಕು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಯುಕ್ತವಾಗಿದ್ದರೆ, ಆ ಮಣ್ಣಿನಲ್ಲಿ ನಿಗದಿತ ಪ್ರಮಾಣದಷ್ಟೇ ಕಬ್ಬಿಣ ಯುಕ್ತವಾಗಿರುವಂತೆ ಮಾಡಲು ಬೇರೆ ಖನಿಜ ರಹಿತವಾದ ಮಣ್ಣು ಸೇರಿಸಿ, ಸರಿದೂಗಿಸಬೇಕು.

ಅಕ್ರಮವಾಗಿ ಗಣಿಗಾರಿಕೆ ನಡೆಸುವವರು ಇದಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನೇರವಾಗಿ ಲಾರಿಗಳನ್ನು ತುಂಬಿ ಕಳುಹಿಸುತ್ತಿರುತ್ತಾರೆ. ಆಗ ಹೆಚ್ಚಿನ ಪ್ರಮಾಣದಲ್ಲಿ ಅದಿರುಯುಕ್ತ ಮಣ್ಣು ವಿದೇಶಕ್ಕೆ ಹೋಗುತ್ತದೆ. ಇದು ದೇಶಕ್ಕೆ ಆಗುವ ದೊಡ್ಡ ನಷ್ಟ. ಒಂದು; ಮೊದಲೇ ಅಕ್ರಮವಾಗಿ ಈ ಅದಿರು ವಿದೇಶಕ್ಕೆ ಹೋಗುತ್ತಿರುತ್ತದೆ. ಇನ್ನೊಂದು ಆತಂಕವೆಂದರೆ ಹೆಚ್ಚಿನ ಪ್ರಮಾಣದಲ್ಲಿ ಅದಿರು ಹೀಗೆ ನಮ್ಮ ನಾಡಿನಿಂದ ಲೂಟಿಯಾಗುತ್ತದೆ ಎನ್ನುವುದು.

ಅಧಿಕೃತವಾಗಿ ಗಣಿಗಾರಿಕೆ ನಡೆಸುತ್ತೇವೆ ಎಂದು ಹೇಳಿಕೊಳ್ಳುವವರೂ ಹೀಗೆ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಖನಿಜಯುಕ್ತವಾದ ಮಣ್ಣನ್ನು ವಿದೇಶಕ್ಕೆ ಸಾಗಿಸುತ್ತಿದ್ದಾರೆ ಎನ್ನುವುದೂ ಗಂಭೀರ ವಿಷಯ. ಇದನ್ನು ನಿಯಂತ್ರಿಸುವುದಕ್ಕಾಗಿ ತಕ್ಕ ಕ್ರಮವನ್ನು ಕೈಗೊಳ್ಳವುದು ಗಣಿಧಣಿಗಳ ಧನಬಲದ ಮುಷ್ಟಿಯಲ್ಲಿ ಸಿಲುಕಿರುವ ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. ಅವರು ಯಾವುದೇ ಖನಿಜ ಪ್ರಮಾಣವನ್ನು ನೋಡುವುದೇ ಇಲ್ಲ, ಲಾರಿಗಳು ಮುಕ್ತವಾಗಿ ಬಂದರುಗಳ ಕಡೆಗೆ ಹೋಗುವುದಕ್ಕೆ ಅವಕಾಶ ಮಾಡಿಕೊಟ್ಟುಬಿಡುತ್ತಾರೆ.

"ಜೀರೋ ಮೆಟೀರಿಯಲ್":

ಗಣಿಗಾರಿಕೆ ವಿಷಯದಲ್ಲಿ ಹಿಂದಿನ ಸರ್ಕಾರಗಳು ತಪ್ಪು ಮಾಡಿವೆ ಎಂದು ಬಿ.ಜೆ.ಪಿ. ಹೇಳುತ್ತಿದೆ. ಆದರೆ ಬಿ.ಜೆ.ಪಿ. ಸರ್ಕಾರ ಬಂದ ನಂತರವೇ ಬಳ್ಳಾರಿಯಿಂದ ಭಾರಿ ಪ್ರಮಾಣದಲ್ಲಿ ಅದಿರು ಲಾರಿಗಳು ವಿವಿಧ ಬಂದರುಗಳ ಕಡೆಗೆ ಪ್ರಯಾಣ ಮಾಡಿದ್ದು ಎನ್ನುವ ಕಟುಸತ್ಯವನ್ನು ಮುಚ್ಚಿಡಲು ಸಾಧ್ಯವೇ ಇಲ್ಲ. ಬಿ.ಜೆ.ಪಿ. ಸಕರ್ಾರ ಬಂದ ನಂತರ ಅದಿರು ಲಾರಿಗಳ ಓಡಾಟ ಯಾವ ಮಟ್ಟಿಗೆ ಹೆಚ್ಚಿದೆ ಎನ್ನುವುದನ್ನು ಬಳ್ಳಾರಿಯಿಂದ ಹಿಡಿದು, ಹೊಸಪೇಟೆ, ಕೊಪ್ಪಳ, ಗದಗ, ಹಾವೇರಿ... ಮಾರ್ಗದಲ್ಲಿರುವ ಜನರನ್ನು ಕೇಳಿದರೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅತಿ ಹೆಚ್ಚಿನ ಸಂಖ್ಯೆಯ ಲಾರಿಗಳಲ್ಲಿ "ಜೀರೋ ಮೆಟೀರಿಯಲ್" ತುಂಬಿರುತ್ತದೆ ಎನ್ನುವುದು ಅಲ್ಲಿನ ಜನರಿಗೆ ಸ್ಪಷ್ಟವಾಗಿ ಗೊತ್ತು.

"ಜೀರೋ ಮಟೀರಿಯಲ್" ಎಂದು ಹೆಸರು ಆ ಭಾಗದಲ್ಲಿ ಪ್ರಚಾರಕ್ಕೆ ಬಂದಿದ್ದು ಅಕ್ರಮ ಗಣಿಗಾರಿಕೆಯಿಂದಾಗಿ. "ಜೀರೋ ಮಟೀರಿಯಲ್" ಎಂದರೆ ಯಾವುದೇ ಪರ್ಮಿಟ್ ಇಲ್ಲದ ಹಾಗೂ ಯಾವುದೇ ಗಣಿ ಕಂಪೆನಿಗೂ ಸೇರಿರದ ಖನಿಜಯುಕ್ತವಾದ ಮಣ್ಣು ಎನ್ನುವುದು. ಇಂಥ ಮಣ್ಣು ತುಂಬಿಕೊಂಡ ಸಾವಿರಾರು ಲಾರಿಗಳು ಈ ಭಾಗದಿಂದ ವಿವಿಧ ಬಂದರುಗಳ ಕಡೆಗೆ ಹೋಗುತ್ತವೆ. ವಿಚಿತ್ರವೆಂದರೆ ಅವುಗಳನ್ನು ಯಾರೂ ತಡೆದು ನಿಲ್ಲಿಸಿ, ದಾಖಲೆ ಕೇಳುವುದಿಲ್ಲ. ಏಕೆಂದರೆ ಗಣಿಧಣಿಗಳು ಇಲ್ಲಿ ಧನಬಲದಿಂದ ಗಣಿಧಣಿಗಳು ರೂಪಿಸಿಕೊಂಡಿರುವ ಪರ್ಯಾಯ ಸರ್ಕಾರದ ಆಡಳಿತವೇ ನಡೆಯುತ್ತದೆ.

ಅಕ್ರಮ ಗಣಿಗಾರಿಕೆ ತನಿಖೆಯ ವಿಷಯ:

ಅಕ್ರಮ ಗಣಿಗಾರಿಕೆ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸಿರುವುದು ಖಂಡಿತ ಸರಿಯಲ್ಲ. ಈ ಕ್ರಮವು ಆಕ್ಷೇಪಾರ್ಹ. ಲೋಕಾಯುಕ್ತವು ರಾಜ್ಯ ಸರ್ಕಾರದ ಹಿಡಿತದಲ್ಲಿ ಇರುವುದು ಎನ್ನುವುದು ಖಂಡಿತವಾಗಿಯೂ ನನ್ನ ದೂರಲ್ಲ. ಆದರೆ ಲೋಕಾಯುಕ್ತಕ್ಕೆ ಅದರದೇ ಆದ ಮಿತಿಗಳಿವೆ ಎನ್ನುವುದು ನನ್ನ ವಾದ. ಅದು ರಾಜ್ಯದ ವ್ಯಾಪ್ತಿಯಿಂದ ಹೊರಗೆ ಹೋಗಿ ತನಿಖೆ ಮಾಡುವುದು ಖಂಡಿತ ಸಾಧ್ಯವಿಲ್ಲ. ಹಾಗೆ ಮಾಡುವಂಥ ಅಧಿಕಾರದ ವ್ಯಾಪ್ತಿಯೂ ಲೋಕಾಯುಕ್ತಕ್ಕೆ ಇಲ್ಲ. ಅದು ರಾಜ್ಯದಲ್ಲಿ ಲಭ್ಯವಾಗುವ ಮಾಹಿತಿಯ ಆಧಾರದಲ್ಲಿಯೇ ತನ್ನ ತನಿಖೆಯನ್ನು ನಡೆಸಬೇಕಾಗುತ್ತದೆ.

ಇಂಥದೊಂದು ಪ್ರಕರಣದ ತನಿಖೆಯು ನಡೆಸುವಾಗ ಅದಿರು ಸಾಗಣೆಯಾದ ವಿವಿಧ ಬಂದರುಗಳು ಇರುವ ರಾಜ್ಯಗಳಲ್ಲಿಯೂ ತನಿಖೆ ನಡೆಸಬೇಕಾಗುತ್ತದೆ. ಅಷ್ಟೇ ಅಲ್ಲ; ಅದಿರು ಖರೀದಿ ಮಾಡಿದ ವಿದೇಶಿ ಕಂಪೆನಿಗಳನ್ನೂ ವಿಚಾರಣೆ ಮಾಡುವ ಹಾಗೂ ಆ ಕಂಪೆನಿಗಳು ಹೊಂದಿರುವ ದಾಖಲೆ ಪತ್ರಗಳನ್ನು ಪರಿಶೀಲಿಸುವುದು ಅಗತ್ಯವಾಗುತ್ತದೆ. ಆದರೆ ರಾಜ್ಯದ ಪರಿಮಿತಿಯಲ್ಲಿರುವ ತನಿಖಾ ಸಂಸ್ಥೆಯು ರಾಜ್ಯದ ಗಡಿಯನ್ನು ದಾಟಿ ಹೋಗಿ ಪ್ರಭಾವಿಯಾಗಿ ತನಿಖೆ ಮಾಡುವುದು ಸಾಧ್ಯವೇ ಆಗದು. ಆದ್ದರಿಂದ ವಿಸ್ತೃತವಾದ ಅಧಿಕಾರವುಳ್ಳ ಸಿ.ಬಿ.ಐ. ಮಾತ್ರ ಇಂಥದೊಂದು ಪ್ರಕರಣವನ್ನು ಸಮರ್ಧವಾಗಿ ತನಿಖೆ ಮಾಡಲು ಸಾಧ್ಯ.

ಲೋಕಾಯುಕ್ತದಿಂದ ಸಾಧ್ಯವಾಗದ ಕೆಲಸ:

ಲೋಕಾಯುಕ್ತ ಏನು ಮಾಡಲು ಸಾಧ್ಯ? ಏನೂ ಇಲ್ಲ. ಈಗ ಅದು ಹೊಂದಿರುವ ಅಧಿಕಾರ ಎಷ್ಟು ಎನ್ನುವುದು ಮುಖ್ಯ ಲೋಕಾಯುಕ್ತರ ರಾಜೀನಾಮೆ ಪ್ರಹಸನವೇ ಸಾಕ್ಷಿ. ಲೋಕಾಯುಕ್ತಕ್ಕೆ ಒಂದು ಸೀಮಿತವಾದ ಚೌಕಟ್ಟಿದೆ. ಅದು ಅದರಿಂದ ಮುಕ್ತವಾಗಿ ರಾಜ್ಯದ ಹೊರಗೆ ಹಾಗೂ ವಿದೇಶದಲ್ಲಿರುವ ಕಂಪೆನಿಗಳ ಕಡೆಗೆ ಹೋಗಿ ದಾಖಲೆಗಳನ್ನು ಪರಿಶೀಲನೆ ಮಾಡುವುದು ಖಂಡಿತವಾಗಿ ಆಗದ ಕೆಲಸ.

ಅಕ್ರಮ ಗಣಿಗಾರಿಕೆ ವಿಷಯವು ಕೇವಲ ರಾಜ್ಯದ ಸಮಸ್ಯೆ ಆಗಿಲ್ಲ. ಅದು ದೇಶದ ಸಮಸ್ಯೆಯಾಗಿದೆ. ಕರ್ನಾಟಕದ ಅದಿರುಯುಕ್ತ ಮಣ್ಣು ವಿದೇಶಕ್ಕೆ ಹೋಗಿರುವುದು ದೇಶದ ವಿವಿಧ ರಾಜ್ಯಗಳಲ್ಲಿರುವ ಬಂದರುಗಳಿಂದ. ಅಷ್ಟೇ ಅಲ್ಲ; ಅದಿರುಯುಕ್ತ ಮಣ್ಣು ಖರೀದಿಸಿರುವ ಕಂಪೆನಿಗಳು ವಿದೇಶದಲ್ಲಿನವು. ಸ್ಥಿತಿ ಹೀಗಿರುವಾಗ ರಾಜ್ಯದ ಚೌಕಟ್ಟಿನಲ್ಲಿ ಕೆಲಸ ಮಾಡುವ ಲೋಕಾಯುಕ್ತ ಇಂಥದೊಂದು ಮಹಾ ಹಗರಣವನ್ನು ತನಿಖೆ ಮಾಡುವುದು ಸಾಧ್ಯವೇ ಇಲ್ಲ.

ತನಿಖೆ ವ್ಯಾಪ್ತಿ:

ಅಕ್ರಮ ಗಣಿಗಾರಿಕೆಯು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಯಬೇಕಾದ ವಿಷಯ. ತನಿಖೆಯ ವ್ಯಾಪ್ತಿಯೂ ಹೆಚ್ಚು. ಆದ್ದರಿಂದ ಸಿ.ಬಿ.ಐ. ತನಿಖೆ ನಡೆಯುವುದೇ ಹೆಚ್ಚು ಸೂಕ್ತ. ಅದರ ಹೊರತಾಗಿ ಬೇರೆ ಮಾರ್ಗವೇ ಇಲ್ಲ. ಲೋಕಾಯುಕ್ತ ತನಿಖೆ ನಡೆದರೂ ಅದು ಒಪ್ಪುವಂಥದಾಗಿರುವುದಿಲ್ಲ ಎನ್ನುವುದನ್ನು ಈಗಲೇ ನಾನು ಸ್ಪಷ್ಟವಾಗಿ ಹೇಳುತ್ತೇನೆ. ಅದನ್ನು ನಾಡಿನ ಜನರು ಖಂಡಿತವಾಗಿ ಒಪ್ಪುವುದಿಲ್ಲ. ಆದ್ದರಿಂದ ತನಿಖೆಯ ವ್ಯಾಪ್ತಿಯನ್ನು ಪರಿಗಣಿಸಿ ಸಿ.ಬಿ.ಐ. ತನಿಖೆಗೆ ಒಪ್ಪಿಸಬೇಕು ಎನ್ನುವುದು ನನ್ನ ಒತ್ತಾಯ.

ಸಿ.ಬಿ.ಐ. ಮಾತ್ರ ನಂಬಲರ್ಹ ತನಿಖೆ ಮಾಡಲು ಸಾಧ್ಯ:

ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆ ವಿಷಯವನ್ನು ಸಿ.ಬಿ.ಐ.ಗೆ ನೀಡುವ ಮೂಲಕ ದಿಟ್ಟ ಹೆಜ್ಜೆ ಇಡಬೇಕು. ಆಗಲೇ ಒಂದೇ ಏಟಿಗೆ ಎಲ್ಲ ಸಮಸ್ಯೆ ನಿವಾರಣೆಗೆ ಪರಿಹಾರ ಮಾರ್ಗ ಕಂಡುಕೊಂಡಂತಾಗುತ್ತದೆ. ಸಿ.ಬಿ.ಐ. ಕೇಂದ್ರ ಸರ್ಕಾರದ ನಿಯಂತ್ರಣದ ಕೈಗೊಂಬೆ ಎನ್ನುವ ರೀತಿಯಲ್ಲಿ ಯಡಿಯೂರಪ್ಪ ಅವರು ಯೋಚನೆ ಮಾಡುತ್ತಿರುವುದು ಅರ್ಥವಿಲ್ಲದ್ದು. ಹಾಗೆ ಮಾಡುವ ಅಗತ್ಯವೂ ಇಲ್ಲ.

ಸಿ.ಬಿ.ಐ. ವಿರೋಧ ಪಕ್ಷದ ನಾಯಕರೂ ಇರುವಂಥ ಆಯ್ಕೆ ಸಮಿತಿಯಿಂದ ನೇಮಕವಾದ ನಿರ್ದೇಶಕರನ್ನು ಹೊಂದಿದೆ. ಜಾಗೃತ ಆಯೋಗದ ಮೇಲ್ವಿಚಾರಣೆಯಲ್ಲಿ ಸಿಬಿಐ ಕಾರ್ಯನಿರ್ವಹಿಸಬೇಕಾಗುತ್ತದೆ ಎನ್ನುವುದನ್ನೂ ಮರೆಯುವಂತಿಲ್ಲ. ಅಷ್ಟೇ ಅಲ್ಲ ಸಿ.ಬಿ.ಐ. ತನ್ನ ತನಿಖೆಯ ಪ್ರತಿಯೊಂದು ಹಂತದ ಮಾಹಿತಿ ಹಾಗೂ ಅಂತಿಮ ವರದಿಯನ್ನು ಸಲ್ಲಿಸುವುದು ಸರ್ಕಾರಕ್ಕೆ ಅಲ್ಲ. ವರದಿ ಸಲ್ಲಿಸುವುದು ಸುಪ್ರೀಂ ಕೋರ್ಟ್ ಮುಂದೆ ಮಾತ್ರ ತಾನು ಕಲೆಹಾಕಿದ ಮಾಹಿತಿ ಹಾಗೂ ತನಿಖಾ ವರದಿಯನ್ನು ಸಲ್ಲಿಸುತ್ತದೆ.

ಅನೇಕ ಸಂದರ್ಭದಲ್ಲಿ ಬಿ.ಜೆ.ಪಿ. ಕೂಡ ಸಿ.ಬಿ.ಐ. ತನಿಖೆಗೆ ಅನೇಕ ಪ್ರಕರಣಗಳನ್ನು ಒಪ್ಪಿಸಲು ಒತ್ತಾಯ ಮಾಡಿತ್ತು. ಅಷ್ಟೇ ಅಲ್ಲ ಅನೇಕ ಪ್ರಕರಣಗಳು ಸಿ.ಬಿ.ಐ. ಮೂಲಕ ತೃಪ್ತಿಕರ ತನಿಖೆಯಿಂದ ಪರಿಹಾರ ಕಂಡಿವೆ. ಸಿ.ಬಿ.ಐ. ಕಳೆದ ಆರು ದಶಕಗಳಲ್ಲಿ ತನ್ನ ನ್ಯಾಯೋಚಿತವಾದ ಹಾಗೂ ದಕ್ಷತೆಯುಳ್ಳ ತನಿಖೆಯಿಂದ ವಿಶ್ವಾಸ ಗಳಿಸಿದೆ. ಇಂಥದೊಂದು ತನಿಖಾ ಸಂಸ್ಥೆಯ ಮೇಲೆ ವಿಶ್ವಾಸ ಹೊಂದಿ, ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆಯ ವಿಷಯವನ್ನೂ ಸಿ.ಬಿ.ಐ.ಗೆ ಒಪ್ಪಿಸಬೇಕು ಎನ್ನುವುದು ನನ್ನ ಒತ್ತಾಯ.

ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ:

ಗಣಿಗಾರಿಕೆಯನ್ನೇ ನಿಷೇಧಿಸುವ ಮುಖ್ಯಮಂತ್ರಿಯವರ ತೀರ್ಮಾನವು ಹಾಸ್ಯಾಸ್ಪದವಾಗಿದೆ. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ಹಾಗೆ ಆಗಿದೆ. ನಿಷೇಧವು ಖಂಡಿತವಾಗಿ ಪರಿಹಾರವಲ್ಲ. ಆಥರ್ಿಕ ಪ್ರಗತಿಗೆ ನಾಡಿನ ಸಂಪತ್ತಿನ ಪ್ರಯೋಜನ ಆಗಬೇಕು. ಆದರೆ ಅದು ಕೆಲವರು ಆರ್ಧಿಕವಾಗಿ ಬಲಗೊಳ್ಳುವುದಕ್ಕೆ ಮಾರ್ಗವಾಗಬಾರದು. ಗಣಿಗಾರಿಕೆಯು ವ್ಯವಸ್ಥಿತವಾಗಿ ಒಂದು ಮಿತಿಯಲ್ಲಿ ನಡೆಯಬೇಕು. ಆದರೆ ಬಹುಬೇಗ ಹಣವನ್ನು ಗುಡ್ಡೆಮಾಡಿಕೊಳ್ಳಬೇಕು ಎನ್ನುವ ಆತುರದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಅದಿರುಯುಕ್ತ ಮಣ್ಣನ್ನು ಕೊಳ್ಳೆ ಹೊಡೆಯಲಾಗಿದೆ.

ಹಿಂದಿನ ಸರ್ಕಾರಗಳು ಗಣಿಗಾರಿಕೆಗೆ ಅನುಮತಿ ನೀಡಿದ್ದು ಎಂದು ಮೈಕೊಡವಿಕೊಳ್ಳುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಆದರೆ ವಾಸ್ತವವೇ ಬೇರೆಯಾಗಿದೆ. ಗಣಿಧಣಿಗಳು ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದಿಂದ ಅಕ್ರಮವಾಗಿ ಸಾಗಿಸಿರುವ ಅದಿರುಯುಕ್ತ ಮಣ್ಣಿನ ಪ್ರಮಾಣ ಅಪಾರ. ಅದಕ್ಕೆ ಸಾಕ್ಷಿಯಾಗಿ ನಿಂತಿವೆ, ಗಣಿಗಾರಿಕೆ ನಡೆದಲ್ಲಿನ ಮಹಾ ಕಂದಕಗಳು. ಅವುಗಳು ರಾಜ್ಯದ ಭೊಕ್ಕಸಕ್ಕೆ ಆಗಿರುವ ನಷ್ಟದ ಸಂಕೇತ ಎನ್ನುವಂತೆ ನಮ್ಮೆದುರಿಗೆ ಇವೆ. ಅಲ್ಪ ಕಾಲದಲ್ಲಿ ಇಷ್ಟೆಲ್ಲಾ ಕೊಳ್ಳೆ ಹೊಡೆ ನಂತರ ಈಗ ನಿಷೇಧ ಎನ್ನುವ ಮಂತ್ರ ಪಠಣ ನಡೆಸಿರುವುದು ಖಂಡಿತ ಒಪ್ಪುವಂಥದಲ್ಲ.

ನಾಡಿನ ಹಿತ ಬಯಸುವ

ಬಿ.ಬಿ.ರಾಮಸ್ವಾಮಿ ಗೌಡ
ಶಾಸಕರು, ಕುಣಿಗಲ್ ವಿಧಾನಸಭಾ ಕ್ಷೇತ್ರ

ಆನೆಗಳ ಜೀವಕ್ಕೆ ಎರವು...!


ಈ ಚಿತ್ರವನ್ನು ನೋಡಿ; ಇದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊತ್ತುಕೊಂಡಿರುವುದು ಆನೆಯ ಬೃಹತ್ತಾದ ದಂತ. ಕಳ್ಳಸಾಗಣೆ ಮಾಡುತ್ತಿದ್ದ ಈ ದೊಡ್ಡ ದಂತವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆ ನಡೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿ. ಈ ಭಾಗದ ಅರಣ್ಯದಲ್ಲಿ ಅವ್ಯಾಹತವಾಗಿ ದಂತ ಕಳ್ಳಸಾಗಣೆ ನಡೆಯುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟವಾದ ಸಾಕ್ಷಿ. ವಿಶೇಷ ಗಮನಿಸಿ ಈ ಆನೆ ದಂತವು ಎಂಟು ಅಡಿ ಎರಡು ಅಂಗುಲ ಉದ್ದವಾಗಿದೆ. ತೂಕ ಸುಮಾರು ಐವತ್ತು ಕೆ.ಜಿ. ಆಗಿದೆ.

ಕಾಡಿನಲ್ಲಿ ಗಸ್ತು ಬಿಗಿಗೊಳಿಸಿ ಪೋಚರ್ಸ್ ಅಟ್ಟಹಾಸ ನಡೆಯದಂತೆ ಮಾಡುವಲ್ಲಿ ಸೂಕ್ತ ಕ್ರಮ ಕೈಗೊಂಡರೆ, ಭವಿಷ್ಯದಲ್ಲಿ ಮತ್ತೆ ಇಂಥ ಘಟನೆಗಳು ನಡೆಯುವುದಿಲ್ಲ. ಈ ದಂತದ ಗಾತ್ರವನ್ನು ಗಮನಿಸಿದರೆ; ಪೋಚರ್ಸ್ ದಾಳಿಗೆ ಬಲಿಯಾದ ಈ ಗಂಡು ಅನೆಯ ಗಾತ್ರ ಎಂಥದೆನ್ನುವುದೂ ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಆನೆಗಳ ರಕ್ಷಣೆಗೆ ಸೂಕ್ತ ಕ್ರಮವನ್ನು ಕೈಗೊಳ್ಳದಿದ್ದ ಪಕ್ಷದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಎನ್ನುವ ಕೀರ್ತಿಯನ್ನು ಕರ್ನಾಟಕ ಕಳೆದುಕೊಳ್ಳುವ ಅಪಾಯವಿದೆ.

ಆದ್ದರಿಂದ ಅರಣ್ಯ ಇಲಾಖೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಜೊತೆಗೆ ಅರಣ್ಯ ಸಿಬ್ಬಂದಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು. ಆಗಲೇ ಕಾಡಿನಲ್ಲಿರುವ ವನ್ಯಜೀವಿಗಳು ಸುರಕ್ಷಿತವಾಗಬಹುದು. ಸೌಲಭ್ಯಗಳ ಕೊರತೆ ಇರುವ ಕಾರಣ ಅರಣ್ಯ ಕಾವಲುಗಾರರು ತಮ್ಮ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಲು ಆಗುವುದಿಲ್ಲ. ಜೊತೆಗೆ ಸಂಪರ್ಕ ವ್ಯವಸ್ಥೆಯ ಕೊರತೆಯೂ ಇದೆ. ಈ ಕಾರಣಕ್ಕಾಗಿಯೇ ಪೋಚರ್ಸ್ (ಕಾಡುಗಳ್ಳರು) ವಿರುದ್ಧ ಕಾರ್ಯಾಚರಣೆ ಮಾಡುವುದು ಅವರಿಗೆ ಕಷ್ಟವಾಗುತ್ತಿದೆ.

ಈ ನಿಟ್ಟಿನಲ್ಲಿ ಸರ್ಕಾರವು ಗಮನ ಹರಿಸುವ ಅಗತ್ಯವಿದೆ. ಕರ್ನಾಟಕದಲ್ಲಿರುವ ಇಂಥ ಬೃಹತ್ ಗಾತ್ರದ ಆನೆಗಳು ಮರೆಯಾಗಿ ಹೋಗದಂತೆ ಮಾಡಲು ಕಾಡಿನ ರಕ್ಷಣೆಗೆ ಬಲ ನೀಡುವುದು ಅಗತ್ಯ ಮಾತ್ರವಲ್ಲ ಅನಿವಾರ್ಯ.

ತುರ್ತಾಗಿ ಚಿಕಿತ್ಸೆ ಸಿಗದೇ ಸತ್ತು ಹೋಯಿತು ಆನೆ

ನಾನೀಗ ಪ್ರಸ್ತಾಪ ಮಾಡುತ್ತಿರುವ ವಿಷಯ ಗಂಭೀರವಾದದ್ದು. ಹೌದು; ಇದು ಬಹಳ ಗಂಭೀರವಾದ ವಿಷಯ. ಯಾಕೆಂದರೆ ಇದು ಆನೆಗಳಿಗೆ ಸಂಬಂಧಿಸಿದ್ದು. ಹೌದು; ಆನೆಗಳ ಪಾಡು ನೋಡೋದಕ್ಕೆ ಆಗೋದಿಲ್ಲ! ಅಯ್ಯೋ ಪಾಪ; ಅನಿಸುತ್ತೆ...!

ನಾನು ಇಲ್ಲಿ ಹೇಳುತ್ತಿರುವುದು ನಾಡಿನಲ್ಲಿ ಇರುವ "ಬಿಳಿಯಾನೆ"ಗಳ ಬಗ್ಗೆ ಅಲ್ಲ. ಇದು ಕಾಡಿನಲ್ಲಿ ಪಡಬಾರದ ಪಾಡು ಪಡುತ್ತಿರುವ ಆನೆಗಳ ವಿಷಯ...!

ಅದೆಷ್ಟೊಂದು ಕಾಡಾನೆಗಳು ಗಾಯಗೊಂಡಿವೆ; ಅವುಗಳು ತಮ್ಮ ಹಿಂಡಿನಿಂದ ದೂರವೂ ಆಗಿವೆ. ಅಂಥ ಅನೇಕ ಆನೆಗಳ ಬಗ್ಗೆ ನಾವೆಲ್ಲಾ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಓದಿದ್ದೇವೆ ಹಾಗೂ ದೃಶ್ಯಗಳ ರೂಪದಲ್ಲಿ ನೋಡಿ ಮರುಗಿದ್ದೇವೆ. ಅಷ್ಟಕ್ಕೆ ಮುಗಿಯಿತು; ಆನಂತರ ಆ ಕಾಡಾನೆಗಳ ವಿಷಯವನ್ನು ಮರೆತುಬಿಟ್ಟಿದ್ದೇವೆ.

ಇಲ್ಲಿ ನೋಡಿ; ಈ ಚಿತ್ರಗಳಲ್ಲಿ ಒಂದು ಆನೆಯಿದೆ. ನೋವು ತಾಳಲಾರದೆ ತಿಂಗಳುಗಟ್ಟಲೇ ಇದು ಬಳಲಿತು. ಆನಂತರ ಕೊನೆಯುಸಿರೆಳೆಯಿತು. ಇದು ಸುಮಾರು ಆರು ವರ್ಷ ವಯಸ್ಸಿನ ಗಂಡು ಮರಿಯಾನೆ. ಅದರ ಮೊಣಕಾಲಿಗೆ ಗಾಯವಾಗಿತ್ತು. ಸುಮಾರು ಇಪ್ಪತ್ತೈದು ದಿನಗಳ ಹಿಂದಷ್ಟೇ ಇದು ಅರಣ್ಯ ಇಲಾಖೆಯ ಸಿಬ್ಬಂದಿಯ ಗಮನಕ್ಕೆ ಬಂದಿದ್ದು. ಅದಕ್ಕೂ ಮುನ್ನವೇ ಅದು ತನ್ನ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿತ್ತು. ಗಾಯ ಆಗಿರುವ ಭಾಗದಲ್ಲಿ ಊದಿಕೊಂಡಿದ್ದರಿಂದ, ಒಂದು ಹೆಜ್ಜೆ ಕೂಡ ಕದಲಿಸದಂಥ ಕಷ್ಟದ ಸ್ಥಿತಿಯನ್ನು ಎದುರಿಸಿತು.

ಈ ಗಂಡು ಆನೆ ಮರಿಯು ಇಪ್ಪತ್ತೈದು ದಿನಗಳ ಹಿಂದಷ್ಟೇ ಆನೇಕಲ್ ಬಳಿಯಲ್ಲಿ, ಅಂದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಹದೇಶ್ವರ ರಕ್ಷಿತಾರಣ್ಯದಲ್ಲಿ ಸುಮಾರು ದಿನಗಳಿಂದ ಒಂದೇ ಸ್ಥಳದಲ್ಲಿ ನಿಂತುಕೊಂಡಿದ್ದನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಗುರುತಿಸಿದರು. ಆದರೆ ಮೊಟ್ಟ ಮೊದಲ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದು ಮಾತ್ರ ಗುರುವಾರದಂದು ಅಂದರೆ ಜುಲೈ 15. 2010 (ಗುರುವಾರ) ರಂದು ಮಧ್ಯಾಹ್ನ 12.34ಕ್ಕೆ.

ನೋಡಿ ಅಷ್ಟು ಹೊತ್ತಿಗಾಗಲೇ ಅದೆಷ್ಟೊಂದು ನರಳಿತ್ತು ಈ ಗಂಡು ಆನೆಮರಿ. ನೋವನ್ನು ಸಹಿಸಿಕೊಂಡು, ಬಿದಿರು ಸೊಪ್ಪು ಕೂಡ ತಿನ್ನದೆಯೇ ಮೂಳೆಗಳು ಕಾಣುವಹಾಗೆ ಸೊರಗಿ ಹೋಗಿತ್ತು. ಆದರೂ ತುರ್ತಾಗಿ ಅದಕ್ಕೆ ಚಿಕಿತ್ಸೆ ಒದಗಿಸುವುದು ಸಾಧ್ಯವಾಗಲಿಲ್ಲ. ಅದರ ಪರಿಣಾಮವಾಗಿ ಅದೇ ಕಾಡಿನಲ್ಲಿ ನಿಂತ ಸ್ಥಳದಲ್ಲಿಯೇ ಕೊನೆಯುಸಿರೆಳೆದಿತು. ಅದು ಸಾವನ್ನಪ್ಪಿದ್ದು ಜುಲೈ 18. 2010 (ಭಾನುವಾರ) ರಂದು.

ಈ ಗಂಡು ಮರಿಯಾನೆಗೆ ತಕ್ಷಣವೇ ಚಿಕಿತ್ಸೆ ಹಾಗೂ ಒಂದಿಷ್ಟು ಆಹಾರವನ್ನು ಅದು ಇದ್ದ ಸ್ಥಳದಲ್ಲಿಯೇ ಒದಗಿಸುವುದು ಅಗತ್ಯವಾಗಿತ್ತು. ಆದರೆ ಹಾಗೆ ಮಾಡಲು ಆಗಲಿಲ್ಲ. ಇದಕ್ಕೆ ಕಾರಣ; ಅರಣ್ಯ ಇಲಾಖೆಯಲ್ಲಿ ನುರಿತ ಹಾಗೂ ವನ್ಯಜೀವಿಗಳ ಬಗ್ಗೆ ಕಳಕಳಿ ಹಾಗೂ ಕಾಳಜಿ ಹೊಂದಿದ ವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿಯ ಕೊರತೆ ಇರುವುದು. ಡಾಕ್ಟರ್ ಬಿ.ಸಿ.ಚಿಟ್ಟಿಯಪ್ಪ ಅವರನ್ನು ಬಿಟ್ಟರೆ ಅರಣ್ಯ ಇಲಾಖೆಯಲ್ಲಿ ಯಾರಿದ್ದಾರೆ ಆನೆಗಳ ಬಗ್ಗೆ ಕಾಳಜಿ ಹೊಂದಿದ ವೈದ್ಯರು? ಡಾ. ಚಿಟ್ಟಿಯಪ್ಪ ಅವರೇ ಈ ಆನೆಯ ಚಿಕಿತ್ಸೆಗೆ ಬರಬೇಕಾಯಿತು.

ಡಾಕ್ಟರ್ ಬಿ.ಸಿ. ಚಿಟ್ಟಿಯಪ್ಪ ಅವರು ಆ ಆನೆಯನ್ನು ತಲುಪುವುದಕ್ಕೆ ಮೊದಲೇ ಆನೆಗೆ ಒಂದಿಷ್ಟು ಕಾಳಜಿ ಮಾಡುವ ಅಗತ್ಯವಿತ್ತು. ಆದರೆ ಅದು ಆ ಭಾಗದ ರಕ್ಷಿತಾರಣ್ಯದಲ್ಲಿ ಸಾಧ್ಯವೇ ಆಗಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿ ಆನೆಯನ್ನು ತಲುಪಿ, ಅದಕ್ಕೆ ಚಿಕಿತ್ಸೆ ನೀಡುವುದಕ್ಕೆ ಅಗತ್ಯವಿರುವ ಸಾಧನಗಳು ಅಲ್ಲಿ ಇಲ್ಲವೇ ಇಲ್ಲ. ಅಲ್ಲಿ ಅಷ್ಟೇ ಏಕೆ; ರಾಜ್ಯದ ಯಾವುದೇ ಅರಣ್ಯ ಇಲಾಖೆಯ ವಿಭಾಗಗಳಲ್ಲಿ ವನ್ಯಜೀವಿಗಳಿಗೆ ಚಿಕಿತ್ಸೆ ಒದಗಿಸಲು ಅಗತ್ಯ ಸೌಲಭ್ಯ ಇಲ್ಲ. ಗುಣಮಟ್ಟದ ವೈದ್ಯಕೀಯ ಸೇವೆಯ ಕೊರತೆಯಂತೂ ಅಪಾರ.

ಕಾಡಾನೆಯ ಚಿಕಿತ್ಸೆಗೆ ಎಲ್ಲ ವೈದ್ಯಕೀಯ ಸಾಧನ ಹಾಗೂ ಅಗತ್ಯ ವಾಹನಗಳನ್ನು ಹೊಂದಿಸಿಕೊಳ್ಳುವ ಹೊತ್ತಿಗಾಗಲೇ ಎರಡು ಮೂರು ದಿನಗಳು ಕಳೆದು ಹೋಗುವಂಥ ಸ್ಥಿತಿ ಎಲ್ಲೆಡೆಯೂ ಇದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಹದೇಶ್ವರ ರಕ್ಷಿತಾರಣ್ಯದಲ್ಲಿಯೂ ಇದೇ ದುಸ್ಥಿತಿ ಇದೆ. ಮಾನ್ಯ ಮುಖ್ಯ ಮಂತ್ರಿಗಳೇ ಅರಣ್ಯ ಖಾತೆಯನ್ನು ಹೊಂದಿದ್ದಾರೆ. ಅವರು ಈ ಕಡೆಗೆ ಗಮನ ನೀಡುತ್ತಲೇ ಇಲ್ಲ. ಅವರ ಕಾಳಜಿಯು ಬೇರೆ "ಆನೆ"ಗಳನ್ನು ಕಾಪಾಡುವತ್ತಲೇ ಇದೆ. ಅವರು ತಮ್ಮ ಕುರ್ಚಿಗೆ ಆಸರೆಯಾಗಿರುವ "ಆನೆ"ಗಳ ಕಡೆಗೆ ಮಾತ್ರ ಗಮನ ನೀಡಿದ್ದಾರೆ.

ದಯಮಾಡಿ ಈ ರಾಜ್ಯದ ಅರಣ್ಯ ಖಾತೆಯನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿರುವ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಸುತ್ತಲಿರುವ "ಗಜ"ಗಳ ಬಗ್ಗೆ ಮಾತ್ರ ಕಾಳಜಿ ಮಾಡುವುದನ್ನು ಬಿಟ್ಟು, ಕಾಡಿನಲ್ಲಿ ಇರುವ "ಗಜ" ಸಂತತಿಯ ಕಡೆಗೂ ಒಂದಿಷ್ಟು ಕಾಳಜಿ ತೋರಿಸಲಿ.

ಆ ನಿಟ್ಟಿನಲ್ಲಿ ಮುಖ್ಯವಾಗಿ ಅಗತ್ಯ ಇರುವ ವನ್ಯಜೀವಿ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ಅಷ್ಟಕ್ಕೆ ಮುಗಿಯುವುದಿಲ್ಲ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕು. ಅದೆಲ್ಲಕ್ಕಿಂತ ದೊಡ್ಡ ಹಾಗೂ ಮುಖ್ಯವಾದ ಅಗತ್ಯವೊಂದಿದೆ. ರಾಜ್ಯದಲ್ಲಿ "ಆನೆಗಳ ಪುನರ್ವಸತಿ ಕೇಂದ್ರ"ವೊಂದು ಸ್ಥಾಪನೆ ಆಗಲೇಬೇಕು.

"ಆನೆಗಳ ಪುನರ್ವಸತಿ ಕೇಂದ್ರ" ಸ್ಥಾಪನೆಯ ವಿಷಯದಲ್ಲಿ ಈಗಾಗಲೇ ಅರಣ್ಯ ಇಲಾಖೆಗೆ ಸ್ವಯಂ ಸೇವಾ ಸಂಸ್ಥೆಯೊಂದರಿಂದ ಮನವಿಯೂ ಹೋಗಿದೆ. ಅದರ ಕುರಿತು ನಾನು ಇಲ್ಲಿ ಒಂದಿಷ್ಟು ಮಾಹಿತಿ ನೀಡಲು ಬಯಸುತ್ತೇನೆ.

* ಗಾಯಗೊಂಡಿರುವ, ವಯಸ್ಸಾಗಿರುವ ಹಾಗೂ ಅಂಗವಿಕಲವಾಗಿರುವ ಕಾಡಾನೆಗಳು ಹಾಗೂ ಸಾಕಾನೆಗಳನ್ನು ನೋಡಿಕೊಳ್ಳುವುದಕ್ಕೆ ಕರ್ನಾಟಕದಲ್ಲಿ "ಆನೆಗಳ ಪುನರ್ವಸತಿ ಕೇಂದ್ರ"ವೊಂದನ್ನು ಸ್ಥಾಪಿಸುವುದು ಅಗತ್ಯವಾಗಿದೆ.

* ಕಾಡು ಆನೆಗಳೇ ತೀರ ವಿರಳವಾಗಿರುವ ಹರಿಯಾಣಾ ರಾಜ್ಯದಲ್ಲಿಯೇ "ಆನೆಗಳ ಪುನರ್ವಸತಿ ಕೇಂದ್ರ" ಸ್ಥಾಪಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಈಗ ಒಂದು ಅಂದಾಜಿನ ಪ್ರಕಾರ ಕಾಡು ಆನೆಗಳ ಸಂಖ್ಯೆಯೇ ಆರು ಸಾವಿರಕ್ಕೂ ಹೆಚ್ಚಿದೆ. ಅವುಗಳಲ್ಲಿ ಸಾಕಷ್ಟು ಗಾಯಗೊಂಡಿರುವ, ವಯಸ್ಸಾದ ಹಾಗೂ ಅಂಗವಿಕಲವಾಗಿರುವ ಆನೆಗಳೂ ಇವೆ. ಅವುಗಳಿಗಾಗಿ ಕರ್ನಾಟಕದಲ್ಲಿ ಒಂದು "ಆನೆಗಳ ಪುನರ್ವಸತಿ ಕೇಂದ್ರ" ಸ್ಥಾಪಿಸುವ ಯೋಚನೆಯನ್ನೇ ಸರ್ಕಾರ ಮಾಡುತ್ತಿಲ್ಲ.

* ಸ್ವಯಂ ಸೇವಾ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಇಂಥದೊಂದು ಆನೆಗಳ ಪುನರ್ವಸತಿ ಕೇಂದ್ರವನ್ನು ಕರ್ನಾಟಕದಲ್ಲಿ ಸ್ಥಾಪಿಸುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಆದರೆ ಆ ಬಗ್ಗೆ ಸರ್ಕಾರವು ಕಾಳಜಿಮಾಡುತ್ತಿಲ್ಲ ಮತ್ತು ಆಸಕ್ತಿ ತೋರಿಸುತ್ತಿಲ್ಲ.

* "ಹೊಯ್ಸಳ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ"ಯು ಈಗಾಗಲೇ ಸ್ವಯಂ ಇಚ್ಛೆಯಿಂದ ಕರ್ನಾಟಕದಲ್ಲಿ "ಆನೆಗಳ ಪುನರ್ವಸತಿ ಕೇಂದ್ರ"ವನ್ನು ಸ್ಥಾಪಿಸಲು ಆಸಕ್ತಿ ತೋರಿಸಿದೆ. ಈ ಸ್ವಯಂ ಸೇವಾ ಸಂಸ್ಥೆಯು ಈಗಾಗಲೇ ಅಗತ್ಯವಾದ ದಾಖಲೆಗಳೊಂದಿಗೆ ಅರಣ್ಯ ಇಲಾಖೆಗೆ ಸಾಲುಸಾಲಾಗಿ ಪತ್ರಗಳನ್ನು ಬರೆದಿದ್ದು ಮಾತ್ರವಲ್ಲ; ಅರಣ್ಯ ಇಲಾಖೆ ಅಧಿಕಾರಿಗಳನ್ನು ಮುಖತಃ ಭೇಟಿಯಾಗಿ ವಿಷಯವನ್ನು ಕೂಡಾ ವಿವರಿಸಿದೆ.

* ಮುಖ್ಯ ವನ್ಯಜೀವಿ ಪರಿಪಾಲಕರಾದ ಬಿ.ಕೆ. ಸಿಂಗ್ ಅವರನ್ನು ಈ ವಿಷಯವಾಗಿ ಮಾಹಿತಿ ಕೇಳಲು ನಾನು ಕೂಡ ಅವರ ಕಚೇರಿಗೆ 11ನೇ ಜೂನ್, 2010ರಂದು ಹೋಗಿ ಮಾತನಾಡಿದ್ದೆ. ಆದರೆ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಬಗ್ಗೆ ಆಸಕ್ತಿಯೇ ಇಲ್ಲ. "ಆನೆಗಳ ಪುನರ್ವಸತಿ ಕೇಂದ್ರ ಎಂದರೇನು?" ಎನ್ನುವಂತೆ ಅವರು ಮರು ಪ್ರಶ್ನೆಯನ್ನು ಕೇಳುತ್ತಾರೆ.

* ಹತ್ತಾರು ಬಾರಿ ಈ ವಿಷಯವಾಗಿ "ಹೊಯ್ಸಳ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ" ಅವರು ಸಂಪೂರ್ಣವಾದ ಮಾಹಿತಿ ನೀಡಿದ್ದರೂ, ಅದರ ಕಡೆಗೆ ಕಣ್ಣೆತ್ತಿಯೂ ನೋಡದ ಮುಖ್ಯ ವನ್ಯಜೀವಿ ಪರಿಪಾಲಕರ ನಿರ್ಲಿಪ್ತತೆಯು ನನಗೂ ಅಚ್ಚರಿ ಮೂಡಿಸಿದೆ.

ಈ ಕುರಿತು ಅರಣ್ಯ ಇಲಾಖೆಯ ಜವಾಬ್ದಾರಿಯನ್ನೂ ಹೊಂದಿರುವ ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ಸುತ್ತಲಿರುವ "ನಾಡಿನ ಆನೆ"ಗಳ ಬಗ್ಗೆ ಮಾತ್ರ ಕಾಳಜಿ ಮಾಡುವುದನ್ನು ಬಿಟ್ಟು; ಕಾಡಿನಲ್ಲಿ ನರಳುತ್ತಿರುವ ಆನೆಗಳ ಕುರಿತು ಕೂಡ ಒಂದಿಷ್ಟು ಯೋಚನೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.

ತಮ್ಮ ವಿಶ್ವಾಸಿ
ಬಿ.ಬಿ. ರಾಮಸ್ವಾಮಿ ಗೌಡ
ಶಾಸಕರು,
ಕುಣಿಗಲ್ ವಿಧಾನಸಭಾ ಕ್ಷೇತ್ರ